Tuesday, August 25, 2009

ದೂರ ಹೋಗುವ ಬಯಕೆ. ನೀವೇನಂತೀರಿ?

ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು.
ಆದರೆ ಅದಾವುದೂ ಅಲ್ಲ.
ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.... ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮುಊಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮುಊದಲಿಸಿದರು.
ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.
ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.
ಮೊದಲು ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.
ಇನ್ನು ವಿದಾಯದ ಮಾತುಗಳೇಕೆ?
ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯುಊ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದು:ಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ' ಯಾದವರು ಈಗ 'ಸ್ಫೋಟಕ ಸುದ್ದಿ' ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತು ವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.
ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?

Thursday, August 13, 2009

ಸುವರ್ಣ ಬಿಟ್ಟು ಹೊರಟ ಭಟ್ಟರ ವಿದಾಯದ ನುಡಿಗಳು

ಹಿರಿಯ ಪತ್ರಕರ್ತ ಶಶಿಧರ ಭಟ್ ಸುವರ್ಣ ತೊರೆದಿದ್ದಾರೆ.
ಸುವರ್ಣ ನ್ಯೂಸ್ ಬಿಡುವುದಕ್ಕೂ ಮುನ್ನ ಅವರು ತಮ್ಮ ಕುಮ್ರಿ ಬ್ಲಾಗ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.
ಸುದ್ದಿಮಾತು ಓದುಗರಿಗಾಗಿ ಭಟ್ಟರ ಮನದಾಳದ ಮಾತುಗಳು ಇಲ್ಲಿವೆ

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.

Monday, August 10, 2009

ಇದು ಇಂದಿನ ಪತ್ರಿಕಾರಂಗ!

ಎಲ್ಲಾ ಪತ್ರಿಕೆ ಮಾಲೀಕರಿಗೆ ಕನ್ನಡ ಪ್ರಭ ರಂಗನಾಥ್ ಒಂದು ಪಾಠ ಕಲಿಸಿದ್ದಾರೆ. ಆ ಪಾಠ ಇಷ್ಟೆ 'ಯಾರು, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಸಂಪೂರ್ಣ ಸ್ವಾತಂತ್ರ್ಯ ಕೂಡಬಾರದು!!' ಪತ್ರಿಕೆ ಮಾಲೀಕರ ಪೈಕಿ, ಈ ಪಾಠ ಹೆಚ್ಚು ತೀವ್ರವಾಗಿ ತಾಕಿರುವುದು ಮಿಸ್ಟರ್ ಸೋಂತಾಲಿಯಾಗೆ.
ರಂಗನಾಥ್, 90 ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವರ ಮಧ್ಯೆ ರಂಗ ಎಂದೇ ಪರಿಚಿತ. ಅವರು ಕ್ರೈಮ್ ಬೀಟ್ ನಲ್ಲಿದ್ದುದರಿಂದ 'ಕ್ರೈಮ್ ರಂಗ' ಎಂಬ ಆರೋಪ ರೂಪದ ಬಿರುದು ಅವರಿಗುಂಟು. ಅವರು ತಮ್ಮ ವರದಿಗಳಿಗಿಂತ ಪೊಲೀಸ್ ಇಲಾಖೆಯಲ್ಲಿ ಇರುವ ಸಂಪರ್ಕಗಳಿಗಾಗಿ ಹೆಸರಾದವರು. ಸುದ್ದಿ ಹೆಕ್ಕುವ ಕಲೆ ಸಿದ್ಧಿಸಿತ್ತು. ಆ ಕಾರಣ ವೃತ್ತಿಯಲ್ಲಿ ಬೇಗನೇ ಮೇಲೆ ಬಂದರು. ಮುಖ್ಯವರದಿಗಾರ ಹಾಗೇ ಸಂಪಾದಕರೂ ಆದರು. ಸಂಪಾದಕರಾಗಿ ಕನ್ನಡ ಪ್ರಭಕ್ಕೆ ಹೊಸತನ ತಂದರು. ರಾಜಕುಮಾರ್ ತೀರಿಕೊಂಡಾಗ ಕನ್ನಡ ನಾಡೇ ಹುಬ್ಬೇರಿಸುವಂತೆ ಹದಿನಾರು ಪುಟಗಳ ಶ್ರದ್ಧಾಂಜಲಿಯನ್ನು ಅರ್ಧದಿನಕ್ಕೇ ಸಿದ್ಧಪಡಿಸಿದ್ದು ಶ್ಲಾಘನೀಯ. ಇತರ ಪತ್ರಿಕೆಗಳ ಸಂಪಾದಕರು ಯೋಚಿಸುವದಕ್ಕಿಂತ, ಯೋಜಿಸುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದದ್ದು ರಂಗನಾಥ್ ವೈಶಿಷ್ಟ್ಯ. ವರ್ಷದ ಕನ್ನಡಿಗ ಎಂಬ ಯೋಜನೆ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತೀರಾ ಇತ್ತೀಚೆಗೆ ಸಂಪಾದಕೀಯ ಪುಟದಲ್ಲಿ ಪ್ರೊಯೋಗ ಮಾಡಿ ಓದುಗರನ್ನು ಸೆಳೆದದ್ದು ಸಾಮಾನ್ಯವೇನಲ್ಲ.
ಕೆಲವೊಮ್ಮೆ ಅತಿರೇಕ ಇದ್ದದ್ದು ಢಾಳಾಗಿ ಕಾಣುತ್ತಿತ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಾರಿ ಹೇಳಿದ್ದು ಕನ್ನಡಪ್ರಭ. ಆದರೆ ಇವರ ಸಹೋದರ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅಂತಹ ನಿಲುವು ತಾಳಲಿಲ್ಲ. ಪ್ರವೀಣ್ ಸೂದ್ ಮೈಸೂರಿನಲ್ಲಿ ಕಮೀಷನರ್ ಆಗಿದ್ದಾಗ ಫೇಕ್ ಎನ್ ಕೌಂಟರ್ (ಮುಖಾಮುಖಿ ಅಷ್ಟೆ. ಎನ್ ಕೌಂಟರ್ ಎಂದಾಕ್ಷಣ ಸಾಯಲೇಬೇಕಿಲ್ಲ) ಪ್ರಕರಣದ ವರದಿಯನ್ನು ಮಿಸ್ಟರ್ ರಂಗನಾಥ್ ಆ ಘಟನೆ ಆಗುವ ಮುನ್ನವೇ ಬರೆದಿಟ್ಟಿದ್ದರು ಎಂಬ ಸುದ್ದಿ ಇದೆ.
ಇಷ್ಟೆಲ್ಲಾ ಪ್ರಯೋಗಗಳು, ಅತಿರೇಕಗಳು ಸಾಧ್ಯವಾಗಿದ್ದು ಸೋಂತಾಲಿಯ ರಂಗನಾಥರ ಮೇಲಿಟ್ಟಿದ್ದ ವಿಶ್ವಾಸದಿಂದ. ಹಾಗೂ ಅವರು ಕೊಟ್ಟ ಸ್ವಾತಂತ್ರ್ಯದಿಂದ!
ಕೆಲವೇ ದಿನಗಳಲ್ಲಿ 'ಕನ್ನಡ ಪ್ರಭ' ಮತ್ತು 'ರಂಗನಾಥ್' ಎಂಬ ಎರಡು ಪದಗಳು ಒಂದೇ ಆಗಿಬಿಟ್ಟವು. ರಂಗ ಎಂದರೆ ಕನ್ನಡಪ್ರಭ ಮತ್ತು ವೈಸ್ ವರ್ಸಾ. ರಂಗನಾಥ್ ಮೊದಲು ವಕ್ರದೃಷ್ಟಿ ಬೀರಿದ್ದು ಪತ್ರಿಕೆಯಲ್ಲಿ ಬಹಳ ಕಾಲದಿಂದ ದುಡಿಯುತ್ತಿದ್ದ ಹಲವರ ಮೇಲೆ. ಅವರೆಲ್ಲರಿಗೂ ಹೊಸ ಹೊಸ ಸಾಫ್ಟ್ ವೇರ್ ಗಳನ್ನು ಕಲಿಯಲು ಡೆಡ್ ಲೈನ್ ನೀಡಿದರು. ಆಗದೇ ಹೋದರೆ ಮನೆಗೆ ನಡೆಯಿರಿ ಎಂದರು. ಬೇಸತ್ತು ಕೆಲವರು ಮನೆಗೆ ಹೋಗುವ ನಿರ್ಧಾರಕ್ಕೆ ಬರುವಂತೆ ಮಾಡಿದರು. ಕೇವಲ ಯುವಕರಿಂದ ತಾನು ಪತ್ರಿಕೆ ಮಾಡುತ್ತೇನೆ. ಹಳಬರೆಲ್ಲ ಸುಮ್ಮನೇ ದಂಡಕ್ಕೆ ಇರುವುದು ಎಂಬ ಮಾತುಗಳನ್ನಾಡುತ್ತಾ ಹಿರಿಯ ಜೀವಗಳು ವಿನಾಕಾರಣ ಗಿಲ್ಟ್ ನಿಂದ ಬೇಯುವಂತೆ ಮಾಡಿದ ಕೀರ್ತಿ ರಂಗನಾಥ್ ಗೆ ಸೇರಬೇಕು.
ರಂಗನಾಥ್ ಪತ್ರಿಕೆಗೆ ಏನೇ ಹೊಸತನ್ನು ತುಂಬಿದ್ದರೂ, ಆತ ಮಾಡದೇ ಹೋದದ್ದು ಏನೆಂದರೆ, ಪತ್ರಿಕೆಗೊಂದು ಭವಿಷ್ಯ ಕೊಡಲಿಲ್ಲ. ವರ್ತಮಾನಕಷ್ಟೆ ಅವರ ಕೊಡುಗೆ. ಈಗ ಅವರ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಪತ್ರಿಕಾಲಯದಲ್ಲಿ ಯಾರೂ ಕಾಣುವುದಿಲ್ಲ. ಅವರ ಸಮಾನಕ್ಕೆ ಬೆಳೆದ ರವಿ ಹೆಗಡೆ ಕೂಡಾ ಹೊರಟು ನಿಂತಿದ್ದಾರೆ. ಒಂದಿಷ್ಟು ಕೆಲಸ ಕಲಿತಿದ್ದ ಕೆಲವರು ರಂಗನಾಥ್ ಕರೆದರೆ ಹೋಗಲು ತಾವೂ ರೆಡಿ ಎನ್ನುತ್ತಿದ್ದಾರೆ. ಸೋಂತಾಲಿಯಾಗೆ ಈಗ ತಪ್ಪಿನ ಅರಿವಾಗಿದೆ. ಏಕಾಏಕಿ ರಂಗನಾಥ್ ಹೊರಟು ನಿಂತಾಗ, ಅವರ ಸ್ಥಾನದಲ್ಲಿ ಯಾರನ್ನು ಕೂರಿಸಿವುದು?
ಕನ್ನಡ ಪತ್ರಿಕಾ ಇತಿಹಾಸವನ್ನು ಗಮನಿಸಿದರೆ ಮೊದಲ ಹಂತದಲ್ಲಿ ಉತ್ತಮ ಸಾಹಿತಿ ಬರಹಗಾರರು ಸಂಪಾದಕರಾಗಿ ದುಡಿದಿದ್ದಾರೆ. ಅವರಿಗೆ ಹೇಗೆ ಹೇಳುತ್ತೇವೆ, ಎನ್ನವುದಕ್ಕಿಂತ ಏನನ್ನು ಹೇಳುತ್ತೇವೆ ಎಂಬುದರ ಬಗ್ಗೆ ತೀವ್ರ ಆಸ್ಥೆ. ಮುಖ್ಯವಾಹಿನಿ ಮತ್ತು ಟ್ಯಾಬ್ಲಾಯ್ಡ್ ಕ್ಷೇತ್ರದಲ್ಲೂ ಹೀಗೇ ಆದದ್ದು. ನಂತರದ ದಿನಗಳಲ್ಲಿ, ಬರಹಗಾರರು ಹಿಂದಕ್ಕೆ ಸರಿದು, ಪತ್ರಿಕೋದ್ಯಮವನ್ನು ಅಕಡೆಮಿಕ್ ಶಿಸ್ತಾಗಿ ಓದಿಕೊಂಡವರು ಪತ್ರಿಕೆಗಳ ಸಾರಥ್ಯ ವಹಿಸಿದರು. ಅವರ ಪಾಲಿಗೆ ಪತ್ರಿಕೆ ಸಂವಹನಕ್ಕೆ ಒಂದು ಮಾಧ್ಯಮ ಅಷ್ಟೆ. ಇಂತಹವರು ಬಹುಬೇಗನೆ ಪತ್ರಿಕಾ ಮಾಲೀಕರ ಅಗತ್ಯ, ಜಾಹಿರಾತುದಾರರ ಮರ್ಜಿ ಮತ್ತು ವಿತರಕರ ಹಿತಾಸಕ್ತಿಗಳಿಗೆ ಮಣಿಯುತ್ತಿದ್ದರು. ಕಾರಣ ಇಷ್ಟೆ, ಅವರು ಕಲಿತು ಬಂದ ಪತ್ರಿಕೋದ್ಯಮ ಪಾಠದ ಪ್ರಕಾರ ಹೆಚ್ಚು ಸರ್ಕ್ಯುಲೇಶನ್ ಯಶಸ್ವೀ ಸಂವಹನದ ಸಂಕೇತ. ಜತೆಗೆ ಅವರಿಗೆ ಆಡಳಿತದಲ್ಲಿ ಹಿಡಿತ ಸಿದ್ಧಿಸಿತ್ತು. ತಮ್ಮ ಕೈ ಕೆಳಗಿನವರಿಂದ ಕೆಲಸ ತೆಗೆಯುವ ಕಲೆ ಗೊತ್ತು. ಆದರೆ ಉತ್ತಮ ಪತ್ರಕರ್ತರನ್ನು ಸೃಷ್ಟಿಸುವ ಜರೂರು ಇವರಿಗಿಲ್ಲ. ರಂಗನಾಥ್ ಅನೇಕರಿಗೆ ಕೆಲಸ ಕೊಟ್ಟು ಪತ್ರಕರ್ತರನ್ನಾಗಿ ಮಾಡಿರಬಹುದು.
ಆದರೆ ಅದೇ ಪತ್ರಿಕೆಯಲ್ಲಿ ಬಹಳ ಕಾಲ ದುಡಿದ ಸೂ. ರಮಾಕಾಂತ್ ಹಲವು ಆರೋಗ್ಯವಂತಹ ಮನಸ್ಸುಗಳಿಗೆ ಪ್ರೇರಕರಾಗಿದ್ದರು. ದೇವನೂರು ಮಹದೇವ ತನಗೆ ಸಮಾಜವಾದದ ದೀಕ್ಷೆ ಕೊಟ್ಟಿದ್ದೇ ಸೂ.ರಮಾಕಾಂತ್ ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಯೋಚಿಸಿ, ಇಂದಿನ ಪತ್ರಿಕೋದ್ಯಮದಲ್ಲಿ ಇಂತಹದೊಂದು ದೀಕ್ಷೆ ಕೊಡಬಲ್ಲವರು ಎಷ್ಟು ಜನರಿದ್ದಾರೆ? (ಬೇಕಾದ್ರೆ ಕೋಮುವಾದದ ದೀಕ್ಷೆ ಕೊಡಲು ಬೇಕಾದಷ್ಟು ಜನರಿದ್ದಾರೆ!) ಅಬ್ಬಬ್ಬಾ ಅಂದರೆ ರಂಗನಾಥ್ ತನಗೆ ಗೊತ್ತಿರುವ ಹಿರಿಯ ಅಧಿಕಾರಿಗೆ ಕಿರಿಯ ವರದಿಗಾರನನ್ನು ಪರಿಚಯಿಸಿ ಸುದ್ದಿ ತರಲು ಸಹಾಯ ಮಾಡಬಹುದು.
ಇದೆಲ್ಲಾ ಏಕೆ ಹೇಳಬೇಕಾಯಿತು ಎಂಬುದು ಈ ಬ್ಲಾಗ್ ಓದುಗರಿಗೆ ಗೊತ್ತಿದೆ. ರಂಗನಾಥ್ ಮತ್ತು ರವಿ ಹೆಗಡೆ ತಮ್ಮ ಕೆಲ ಗೆಳೆಯರ ಸಂಗಡ ಸುವರ್ಣ ಚಾನೆಲ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಕಳೆದ ವಾರ ಅವರು ರಾಜೀನಾಮೆ ನೀಡಿದರು ಎನ್ನುವ ಸುದ್ದಿ ಜಗಜ್ಜಾಹೀರು. ಪತ್ರಿಕೆಗೆ ಯಾರೂ ಅನಿವಾರ್ಯರಲ್ಲ. ಆದರೆ ಆಯಕಟ್ಟಿನ ಜಾಗೆಯಲ್ಲಿದ್ದವರೆಲ್ಲಾ ಗುಳೇ ಹೊರಟರೆ ಪತ್ರಿಕೆ ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ.