ಇನ್ನು ಕೆಲವೇ ದಿನಗಳಲ್ಲಿ 'ಸುದ್ದಿಮಾತು'ಗೆ ಒಂದು ವರ್ಷದ ಸಂಭ್ರಮ. ಆ ಆಚರಣೆಗೆ ಮುನ್ನವೇ ನಾವು ನಿಮ್ಮಿಂದ ವಿದಾಯ ಬಯಸುತ್ತಿದ್ದೇವೆ. ವಿದಾಯ ಎಂದಾಕ್ಷಣ ನಿಮ್ಮಲ್ಲಿ ಹಲವು ಆಲೋಚನೆಗಳು ಒಮ್ಮೆಲೆ ನುಗ್ಗಿ ಬಂದಿರಬಹುದು. ಇವರ ಮೇಲೆ ಯಾರೋ ಕೇಸು ಹಾಕಿರಬೇಕು, ಇಲ್ಲ ಯಾರೋ ಇವರೇ ಮಾಡ್ತಿರೋದು ಅಂತ ಗೊತ್ತಾಗಿ ಧಮಕಿ ಹಾಕಿರಬೇಕು - ಹೀಗೆ ನಿಮ್ಮಲ್ಲಿ ಅನೇಕ ಐಡಿಯಾಗಳು ಹೊಳೆದಿರಲೂ ಸಾಕು.
ಆದರೆ ಅದಾವುದೂ ಅಲ್ಲ.
ಒಂದು ವರ್ಷದ ಹಿಂದೆ ಹೀಗೆ ಯಾವುದೋ ಪತ್ರಿಕಾ ವರದಿಗೆ ಸ್ಪಂದಿಸುವ ನೆವದಲ್ಲಿ ಬ್ಲಾಗ್ ಹುಟ್ಟಿಕೊಂಡಿತು. ನಿನ್ನೆ ಒಂದು ಪೋಸ್ಟ್ ಮಾಡಿದಿವಿ, ಇಂದೂ ಒಂದು ಮಾಡಿದರೆ ಹೇಗೆ.... ಹೀಗೆ ಸುದ್ದಿಮಾತು ಒಂದು ರೂಪ ಪಡೆದುಕೊಂಡಿತು. ಆ ನಂತರ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಗಿದೆವು. ಕೆಲವೊಮ್ಮೆ ಉತ್ತಮ ಬರಹಗಳನ್ನು ಹೆಕ್ಕಿ ಹಾಕಿದೆವು. ಆರಂಭದಲ್ಲಿ ಬಂದ ಪ್ರತಿಕ್ರಿಯೆಯಿಂದ ಹಿಗ್ಗಿದೆವು. ನಮಗೆ 'ನಾವು ಯಾರು' ಎಂದು ಹೇಳಿಕೊಳ್ಳುವುದಕ್ಕಿಂತ, ನಮ್ಮ ವಿಚಾರವನ್ನು ಹೇಗೆ ಬ್ಲಾಗ್ ಓದುಗ ಸಮುಊಹ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿತ್ತು. ಕೆಲವರು 'ನೀವು ಕಾಂಗ್ರೆಸ್ಸಿನವರು' ಎಂದು ಟೀಕಿಸಿದರೆ, ಇನ್ನು ಕೆಲವರು 'ನೀವು ಎಡಪಂಥೀಯರು' ಎಂದು ಮುಊದಲಿಸಿದರು.
ಪ್ರಜಾವಾಣಿ ಪತ್ರಿಕೆಯನ್ನು ಒಟ್ಟಾರೆಯಾಗಿ ಒಪ್ಪಿಕೊಳ್ಳುತ್ತಲೇ, ಅದರ ಕೆಲ ಧೋರಣೆಗಳನ್ನು ಟೀಕಿಸಿದೆವು. ಆ ಪತ್ರಿಕೆ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದ ಸಂಪಾದಕೀಯದಲ್ಲಿ ತಪ್ಪುಗಳನ್ನು ಹುಡುಕಿ ಬರೆದ ಲೇಖನ ಉತ್ತಮ ಪ್ರತಿಕ್ರಿಯೆ ತಂದಿತ್ತು. ಹಾಗೆಯೇ ವಿಜಯ ಕರ್ನಾಟಕ ಪಕ್ಕಾ ಚೆಡ್ಡಿಯಾಗಿ ವರ್ತಿಸಿದಾಗ ಟೀಕಿಸಲೇ ಬೇಕಾಯ್ತು. ಆದರೆ ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲಿಲ್ಲ. ವಿಚಾರದ ನೆಲಗಟ್ಟಿನಲ್ಲೇ ನಮ್ಮ ಟೀಕೆ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ ಎಂದೇ ನಮ್ಮ ನಂಬುಗೆ.
ಈ ಮಧ್ಯೆ ನಮ್ಮ ಓದುಗರು ಸುದ್ದಿಮಾತುಗಾರರನ್ನು ಅನೇಕರಲ್ಲಿ ಹುಡುಕಿದರು. ಜಿ.ಎನ್ ಮೋಹನ್, ದಿನೇಶ್.. ಹೀಗೆ ಪತ್ರಿಕಾ ಜಗತ್ತಿನ ಅನೇಕ ಹೆಸರುಗಳು ಹರಿದಾಡಿದವು. ಕೆಲವರಂತೂ, 'ಅವರು ನಮ್ಮ ಹುಡುಗರೇ ಕಣೋ' ಎಂದು ಸುಖಾ ಸುಮ್ಮನೆ ಎಲ್ಲರ ಮುಂದೆ ಒಂಥರಾ ಸ್ಕೋಪ್ ತೆಗೊಳೋಕೆ ಹೇಳಿಕೊಂಡಿದ್ದ ಉದಾಹರಣೆಗಳೂ ಉಂಟು.
ಮೊದಲು ಒಂದು ವಿಚಾರವನ್ನು ಸ್ಪಷ್ಟ ಪಡಿಸುತ್ತೇವೆ. ನಾವು ಯಾರು ಎನ್ನುವುದು ಮುಖ್ಯವೇ ಅಲ್ಲ. ಕಾರಣ ಇಲ್ಲಿ ಯಾರೂ ಮುಖ್ಯರಲ್ಲ! ಅದೇ ಹೊತ್ತಿಗೆ ಇನ್ನೊಂದು ಮಾತು - ನೀವು ಸಂಶಯ ಪಡುತ್ತಿರುವ ಯಾರೂ ನಮ್ಮ ತಂಡದಲ್ಲಿಲ್ಲ. ಜಿ.ಎನ್ ಮೋಹನ್ ನಮ್ಮ ತಂಡದಲ್ಲಿ ಇದ್ದಿದ್ದರೆ, ಅವರಿಗೆ ಪ್ರಶ್ನೆ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ.
ಹೆಸರಿಲ್ಲದೆ ಬರೆದರೆ ಏನೆಲ್ಲಾ ಪ್ರತಿಕ್ರಿಯೆ ಬರಬಹುದು, ಎಂಬ ಸಣ್ಣ ಕುತೂಹಲದಿಂದ ಬ್ಲಾಗ್ ಮುಂದುವರಿಸಿದೆವು. ಇಲ್ಲಿಯವರೆಗೂ ಬಂದು ನಿಂತಿದ್ದೇವೆ. ಹೆಸರು ಹೇಳದಿದ್ದರೂ, ನಾವು ದಾರಿ ತಪ್ಪಲಿಲ್ಲ ಎಂದು ನಂಬುತ್ತೇವೆ. ಯಾರಿಗೂ ಮುಜುಗರಕ್ಕೆ ಈಡು ಮಾಡುವಂತಹ ಬರಹಗಳನ್ನು ಹಾಕಲಿಲ್ಲ. ನಿಜ. ಒಂದೆರಡು ಕಾಮೆಂಟ್ ಗಳನ್ನು ಪಬ್ಲಿಷ್ ಮಾಡುವಾಗ ಎಡವಿದೆವೇನೋ ಎನ್ನಿಸುತ್ತಿದೆ. ಅದು ಆ ಕ್ಷಣ wrong judgement. ಅಂತಹ ಕಾಮೆಂಟ್ ಗಳಿಂದ ಬೇಸರ ಆಗಿರುವವರಿಗೆ ಕ್ಷಮೆ ಕೋರುತ್ತೇವೆ.
ಇನ್ನು ವಿದಾಯದ ಮಾತುಗಳೇಕೆ?
ನಾವು ಹೆಸರು ಹೇಳದೆ ಬ್ಲಾಗ್ ನಡೆಸಿದ ಕಾರಣಕ್ಕೆ, ಹೆಸರಿಲ್ಲದೆ ಬರೆಯುವುದನ್ನು ಬೆಂಬಲಿಸುತ್ತೇವೆ ಎಂದಲ್ಲ. ಹೆಸರಿಲ್ಲದೆ ಉಳಿಯುವುದು ನಿಜವಾಗಿಯುಊ ಸ್ವಾತಂತ್ರ್ಯವೇ. ಆದರೆ ಅದನ್ನೇ ಸ್ವೇಚ್ಛೆಯಾಗಿಸಿಕೊಂಡವರ ಬಗ್ಗೆ ನಮಗೆ ಬೇಸರವಿದೆ. ಆ ಸ್ವಾತಂತ್ರ್ಯ ಆರೋಗ್ಯವಂತ ಚರ್ಚೆಗೆ ಪ್ರೇರಣೆ ಆಗದೆ, ವೈಯಕ್ತಿಕ ನಿಂದನೆಯ ಹಾದಿ ಹಿಡಿಯುತ್ತಿರುವುದು ದು:ಖದ ಸಂಗತಿ. ಸುದ್ದಿಮಾತು ಆರಂಭವಾದಾಗ ಮಾಧ್ಯಮಗಳ ಬಗ್ಗೆ ಬರೆಯುತ್ತಿದ್ದ ಬ್ಲಾಗ್ ಗಳು ಅಷ್ಟಾಗಿ ಕಾಣಲಿಲ್ಲ. ಇತ್ತೀಚೆಗೆ ಅವುಗಳ ಸಂಖ್ಯೆ ಹೆಚ್ಚಿದೆ. ಕೆಲವು ದಿನಗಳ ಹಿಂದೆ 'ಸುದ್ದಿ ಮನೆ ಕತೆ' ಯಾದವರು ಈಗ 'ಸ್ಫೋಟಕ ಸುದ್ದಿ' ಯಾಗಿ ಹಾಜರಾಗಿದ್ದಾರೆ. ಆ ಮಹಾನುಭಾವ ಮೋಹನ್ ಮತ್ತು ದಿನೇಶ್ ಒಂದೇ ದಿನ ಕಾಮೆಂಟ್ ಹಾಕಿದ್ರಂತೆ, ಆ ಕಾರಣಕ್ಕೆ ಇದು ಅವರದೇ ಬ್ಲಾಗ್ ಎಂದು ಫರ್ಮಾನು ಹೊರಡಿಸಿಬಿಟ್ಟ. ಇನ್ಯಾರೋ ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಎಂದು ಹೇಳಿಕೊಂಡು ಬರೆಯುತ್ತಿದ್ದಾನೆ. ಈ ಮಧ್ಯೆ ಕಾರ್ಗಿಲ್ ವೀರ ಶಿವಪ್ರಸಾದ್, ಇಂತಹ ಬ್ಲಾಗರ್ಸ್ ಮಧ್ಯೆ ಸುದ್ದಿಮಾತು ವನ್ನೂ ಸೇರಿಸಿ ಸಾರಾಸಗಟಾಗಿ ತೀರ್ಪು ಕೋಡುತ್ತಾರೆ.
ಇಂತಹ ಕಲುಷಿತ ವಾತಾವರಣದಿಂದ ದೂರ ಇರಬೇಕೆಂಬುದು ನಮ್ಮ ಬಯಕೆ. ನೀವೇನಂತೀರಿ?
What is the governor telling the chief minister?
22 hours ago