Sunday, November 23, 2008

ಮೇಕಪ್ ಕಳಚಿದ ಹೀರೊಗಳು!

ಒಂಟಿ ಹಕ್ಕಿ ಬ್ಲಾಗಿನ ಒಡೆಯ ಕೆ.ಎಸ್.ಸುಪ್ರೀತ್ ಪತ್ರಕರ್ತರ ಕುರಿತ ಬರಹವೊಂದನ್ನು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಅದನ್ನು ಇಲ್ಲಿ ಕೃತಜ್ಞತೆಯೊಂದಿಗೆ ಪ್ರಕಟಿಸುತ್ತಿದ್ದೇವೆ.

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ.
ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!
ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ - ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.
ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!
Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.
………………ಏನನ್ನೋ ಬರೆಯಲು ಹೊರಟು ಅದು ಮತ್ತೇನೋ ಆಗಿಬಿಟ್ಟ ನನ್ನ ಹಲವು ಬರಹಗಳ ಸಾಲಿಗೆ ಇದೂ ಸೇರುತ್ತದೆ. ಅಸಲಿಗೆ ನಾನು ಬರೆಯಬೇಕೆಂದಿದ್ದದ್ದು ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ಟರು ಶಾರದಾ ಪ್ರಸಾದರು ನಿಧನರಾದಾಗ ಸಂಭಾವನೆಗೆ ಸಂಬಂಧಿಸಿದ ಹಾಗೆ ಬರೆದುಕೊಂಡಿದ್ದ ಹಸಿ ಹಸೀ ಸುಳ್ಳು ಹಾಗೂ ಇತ್ತೀಚಿಗಿನ ಮತಾಂತರ ಸಂವಾದದಲ್ಲಿ ಪ್ರಕಟವಾದ ತಾರಿಣಿಯವರ ಲೇಖನದ ಪ್ರಕರಣದ ಬಗ್ಗೆ. ಪ್ರತಿವಾರ ಪತ್ರಿಕೋದ್ಯಮದ ಆದರ್ಶಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಭಟ್ಟರು ಹೀಗೆ ಮಾಡಿರುವುದು ತಿಳಿದು ಅರಗಿಸಿಕೊಳ್ಳಲು ಕೊಂಚ ಕಷ್ಟವಾಯಿತು. ಹಿಂದೆ ಅವರ ಲೇಖನಗಳಲ್ಲಿನ ಎರರ್ಸ್ ಬಗ್ಗೆ ಓದಿದಾಗಲೂ ಹೀಗೇ ಅನ್ನಿಸಿತ್ತು. ಆ ಬಗ್ಗೆ ಬರೆಯೋಣ ಅಂತ ಹೊರಟು ಎಲ್ಲೆಲ್ಲೋ ತಲುಪಿ ಕಡೆಗೆ ಏನೋ ಆಗಿ ಹೋಯಿತು. ಮದುವೆ ಮುಗಿದ ಮೇಲೆ ನೋಡಿದರೆ ಮದುವೆ ಗಂಡೇ ಬದಲಾಗಿದ್ದಾನೆ ಎಂಬ ಪಾಡು!

9 comments:

Anonymous said...

And what you think on the great 'Shadakshri'? he has a ghost writer. Basically Shadakshari has bad tongue. He cracks some filthy jokes. He sponsors the book release function of Mr. V Bhat, provides ample finance help to the editor of VK. Thats how he gets a coulmn and a ghost writer!

Anonymous said...

swamee supreet avare bega excite adre bega disappoint aagi bidteera...adu prakruti niyama...nimmalliruvashtu cinikatana anagatya...

Anonymous said...

don't know about shadakshari. but am wondering which other columnists of vk have ghost writers? how about haldodderi, shivacharya swamiji, srivastha joshi, pratap etc.?

Anonymous said...

ಬರವಣಿಗೆ ಮತ್ತು ಬದುಕಿನ ನಡುವಿನ ವ್ಯತ್ಯಾಸ. ಹೇಳುವುದಕ್ಕೂ ಮಾಡುವುದಕ್ಕು ನಡುವಿನ ವ್ಯತ್ಯಾಸ. ವಿಶ್ವೇಶ್ವರ ಭಟ್ಟರ ಬಗ್ಗೆ ಯಾಕಿಷ್ಟು ತಲೆ ಕೆಡಿಸಿಕೊಳ್ಳಬೇಕೋ ಗೊತ್ತಿಲ್ಲ. ಮೂಲಭೂತವಾಗಿ ಅವರು ಪತ್ರಕರ್ತರಲ್ಲ. ಅನಂತಕುಮಾರ್ ಎಂಬ ರಾಜಕಾರಣಿಯ ಪಿಏ ಆಗಿದ್ದವರನು ಪತ್ರಕರ್ತ ಎಂದು ಹೇಗೆ ಹೇಳೋದು ಸಾಧ್ಯ ? ಒಬ್ಬ ಪತ್ರಕರ್ತ ಯಾವಾಗ ಅನಂತನ ಹಿಂದೆ ಫೈಲು ಹಿಡಿದು ನಿಂತರೋ ಆಗಲೇ ಅವರಳೊಗಿನ ಪತ್ರಕರ್ತ ಸತ್ತ. ನಂತರ ಅವರು ಯಾವ ಪತ್ರಿಕೆಯ ಸಂಪಾದಕರಾದರೂ ಅಷ್ಟೇ. ಅವರು ಅನಂತನ ಮಾಣಿ ಅಷ್ಟೇ. ಈಗ ನಾವು ಚರ್ಚೆ ಮಾಡಬೇಕಾದ್ದು ಖ್ಯಾತ ಪತ್ರಿಕೆಗಳು ಯಾಕೆ ಮಧ್ಯವರ್ತಿಗಳನ್ನು ರಾಜಕಾರಣಿಗಳ ಏಜೆಂಟರನ್ನು ಸಂಪಾದಕರನ್ನಾಗಿ ಮಾಡುತ್ತಾರೆ ಎಂಬ ಬಗ್ಗೆ. ಇಂತಹ ಸಂಪಾದಕರಿಂದ ಪತ್ರಿಕೆಗಳನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ.

Anonymous said...

Thats kannada sampadaka S K Shamsundar hege???

eke yaru avra bagge innu prastapisilla??

Anonymous said...

Ahudu ahudu...Suddimaatannu gamanisutidda haage nanagoo patrakartaru mattu patrakartara bagge 'ondu kannidalu horatavaru' ellaroo kalachi bidda hero galante kaanuttaare

Anonymous said...

pratap simha ge kooda yaaro baredu kodtaarante howda? avanige bareyalu barolvante?

Anonymous said...

v.bhat goo bareyalu barolvante!! avaru lancha kottu sampaadaka aagiddaarante.. sankeshwar ge ondu koti kottiddarante

Anonymous said...

Not just a crore. Severel crores. You know from whose kitty? Ananthu's.