Tuesday, July 28, 2009

ರಿಯಾಕ್ಷನ್ ಪಾರ್ ರಿಯಾಕ್ಷನ್ ಜರ್ನಲಿಸಂ..!

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಹಸಿವು, ಅದಕ್ಕಾಗಿ ಅವರು ಆಯ್ದುಕೊಳ್ಳುವ ಮಾರ್ಗಗಳ ಕುರಿತಂತೆ ಸ್ವತಃ ಎಲೆಕ್ಟ್ರಾನಿಕ್ ಮೀಡಿಯಾ ಒಂದರ ದೆಹಲಿ ಪ್ರತಿನಿಧಿಯಾಗಿರುವ ಶ್ರೀನಿವಾಸಗೌಡ ತಮ್ಮ ಖಾಸಗಿ ಡೈರಿಯಲ್ಲಿ ಬರೆದಿದ್ದಾರೆ.
ಸುದ್ದಿಯನ್ನು ಸೃಷ್ಟಿಸುವ ಚಾಳಿ ಇತ್ತೀಚಿಗೆ ಈ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ. ರಿಯಾಕ್ಷನ್ ಫಾರ್ ರಿಯಾಕ್ಷನ್ ಜರ್ನಲಿಸಂ ಹೊಸ ತಲೆಮಾರಿನ ಪತ್ರಕರ್ತರನ್ನು ಹೇಗೆ ದಿಕ್ಕುತಪ್ಪಿಸಿದೆ ಎಂಬುದಕ್ಕೆ ಈ ಲೇಖನದಲ್ಲಿ ಒಳನೋಟಗಳಿವೆ. ಸುದ್ದಿ ಮಾತು ಓದುಗರಿಗಾಗಿ ಶ್ರೀನಿವಾಸಗೌಡರು ಬರೆದ ಲೇಖನ ಇಲ್ಲಿದೆ.

ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾದ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ ರಾಷ್ಟ್ರೀಯ ಸುದ್ದಿಮಾಡುತ್ತಿದ್ದರು. ತಮಗೆ ಸಿಕ್ಕಿದ್ದೆಲ್ಲವನ್ನು ಎಕ್ಸ್ಲೂಸಿವ್ ಅಂತ ತೋರಿಸೊರು. ನ್ಯಾಷನಲ್ ಮಿಡಿಯಾಗಳಲ್ಲಿ ಪಸ್ಟ್ ಇನ್ ಸಿಎನ್‌ಎನ್ ಐಬಿಎನ್, ಪಸ್ಟ್ ಇನ್ ಟೈಮ್ಸ್ ನೌ, ಪಸ್ಚ್ ಇನ್ ಆಜ್ ತಕ್ ,ಅಂತ ಪ್ರೋಮೋ ಹಾಕಿಕೊಂಡು ರಾಜಕೀಯ ನಾಯಕರ ಸಂದರ್ಶನಗಳು, ಸುದ್ದಿಗಳು ಬರುತ್ತಿದ್ದವು.

ರಾಜಕೀಯ ನಾಯಕರ ಸಂದರ್ಶನ ಸಿಕ್ಕಿದ್ದೆ ಜೀವಮಾನದ ಸಾಧನೆ ಅಂಥ ಟೆಲಿವಿಷನ್ ಪತ್ರಕರ್ತರು ರೋಮಾಂಚನಕ್ಕೆ ಒಳಗಾಗಿದ್ದರು. ದಿನ ಬೆಳಾಗಾದರೆ 'ಲಾಲೂ ಹೀಗೆ ಅಂದವ್ರೆ ನೀವು ಏನ್ ಹೇಳ್ತಿರಿ', 'ಅಮರ್ ಸಿಂಗ್ ಹಿಂಗೆ ಹೇಳವ್ರಲ್ಲಾ ನೀವು ಏನಂತೀರಿ', 'ವರುಣ್ ಗಾಂಧಿ ಹೇಳಿಕೆಗೆ ನಿಮ್ಮ ರಿಯಾಕ್ಷನ್ ಏನು', 'ಮಾಯಾವತಿ ಹಿಂಗೆ ಹೇಳವ್ರಲ್ಲಾ ಅದಕ್ಕೆ ನೀವೆಂಗೆ ಹೇಳ್ತೀರಿ', ಅಂತ ಬೈಟ್ ತೆಗೆದುಕೊಳ್ಳೊದು ಆಯಾ ಬೀಟ್ ನಲ್ಲಿರೋ ಕೆಲಸ. ಇದಕ್ಕೆ ರಾಜಕೀಯ ಪಕ್ಷಗಳ ಸಹಕಾರ ಹೇಗಿದೆಯಪ್ಪಾ ಅಂದರೆ, ದಿನಾ ಸಾಯಂಕಾಲ ಎಲ್ಲಾ ಪಕ್ಷಗಳ ಕಚೇರಿಯಲ್ಲೂ ಪ್ರೆಸ್ ಕಾನ್ಪರೆನ್ಸ್ ಕರೆಯುತ್ತಾರೆ. ಅವರು ಹೇಳಿದ್ದಕ್ಕೆ ಇವರು, ಇವರು ಹೇಳಿದ್ದಕ್ಕೆ ಅವರು ಉತ್ತರ ಕೊಡುತ್ತಾರೆ.

ನೇರವಾಗಿ ಯಾರೂ ಕಚ್ಚಾಡಲ್ಲಾ, ಮೀಡಿಯಾ ರಾಜಕೀಯ ಪಕ್ಷಗಳಿಗೆ ಮೀಡಿಯೇಟರ್ ಇದ್ದ ಹಾಗೆ. ಚಾನಲ್ ಗಳಿಗೆ ಬೇಕಾಗಿದ್ದು ಏನು ಅಂತ ಅವರಿಗೊ ಅರ್ಥ ಆಗಿಹೊಗಿದೆ. ಅದಕ್ಕಾಗಿಯೇ ರಾಜಕೀಯ ಪಕ್ಷಗಳೂ ವರ್ಣರಂಜಿತವಾಗಿ ಮಾತಾಡೋರನ್ನ ಪಕ್ಷದ ವಕ್ತಾರರನ್ನಾಗಿ ನೇಮಿಸಿದ್ದಾರೆ.ಅವರಲ್ಲಿ ಬಹುತೇಕರು ಸುಪ್ರಿಂ ಕೋರ್ಟ್ ಲಾಯರ್ ಗಳು, ಇಲ್ಲಾ ಹಳೇ ಜರ್ನಲಿಸ್ಟ್ ಗಳು. ಪಾಟಿ ಸವಾಲಿಗೆ ಉತ್ತರಿಸಲು ಇವರಿಗೇ ಅಲ್ಲ ಗೊತ್ತಿರೋದು. ಅವರ ಕೆಲಸ ಏನಪ್ಪಾ ಅಂದರೆ ದಿನಪೂರ್ತಿ ಚಾನಲ್ ಗಳಿಗೆ ಬೈಟ್ ಕೋಡೋದು. ಪತ್ರಿಕೆಗಳಿಗೆ ಮಾತಾಡೋದು. ರಿಯಾಕ್ಷನ್ ಪಾರ್ ರಿಯಾಕ್ಷನ್ ಅದು ಅವರ ಕೆಲಸ ಯಾವ ಪಕ್ಷವೂ ಇದರಲ್ಲಿ ಹಿಂದೆ ಬಿದ್ದಿಲ್ಲ ಬಿಡಿ.

ಅವತ್ತು ಏನಾಯ್ತು ಅಂದರೆ ಬಿಜೆಪಿ ಕಚೇರಿಯಲ್ಲಿದ್ದೆವು. ಯಾರೋ ಎಲಕ್ಟ್ರಾನಿಕ್ ಮೀಡಿಯಾದ ವರದಿಗಾರ್ತಿ ಯೊಬ್ಬಳಿಗೆ ಅರುಣ್ ಶೌರಿ ಸಿಕ್ಕಾಪಟ್ಟೆ ರೇಗ್ತಾ ಇದ್ದರು. ನಾನು ಕುತೂಹಲಕ್ಕೆ ಅಂತ ಹತ್ತಿರ ಹೋದೆ.
'ಡೋಂಟ್ ಡೂ ದಿಸ್ ಬ್ಲಡಿ ಜರ್ನಲಿಸಂ, ದಿಸ್ ಈಸ್ ಕಾಲ್ಡ್ ಬೈಟ್ ಜರ್ನಲಿಜಂ. ವೈ ಶುಡ್ ಐ ರಿಯಾಕ್ಟ್ ಪಾರ್ ಸಂ ಒನ್ಸ್ ಸ್ಟೇಟ್ ಮೆಂಟ್. ಗೋ ಗೋ, ಲರ್ನ್ ವಾಟ್ ಈಸ್ ಜರ್ನಲಿಜಂ' ಅಂದರು .
ಒಂದು ರಿಯಾಕ್ಷನ್ ಬೈಟ್ ಕೇಳಿದ ಕಾರಣಕ್ಕೆ ಆ ರಿಪೋರ್ಟರ್ ಸಿಕ್ಕಾಪಟ್ಟೆ ಬೈಸಿಕೊಂಡು ಹ್ಯಾಪ ಮೊರೆ ಹಾಕಿಕೊಂಡು ಕಣ್ಣೀರಾಗುತ್ತಿದ್ದಳು. ಅಷ್ಟೇನು ಅನುಭವಿ ಅಲ್ಲದ ಆಕೆ ಸಿಎನ್‌ಇಬಿ ಎಂಬ ಹಿಂದಿ ಚಾನಲ್ಲಿನ ವರದಿಗಾರ್ತಿ, ಆಕೆ ಮಾಡಿದ ತಪ್ಪೇನಪ್ಪಾ ಅಂದರೆ, ಲಾಲೂ ಪ್ರಸಾದ್ ಯಾದವ್ ಅರುಣ್ ಗಾಂಧಿ ಕುರಿತು ಕೊಟ್ಟಿದ್ದ ಹೇಳಿಕೆಗೆ ಅರುಣ್ ಶೌರಿ ರಿಯಾಕ್ಷನ್ ಕೇಳಿ ಮೈಕ್ ಮುಂದಿಟ್ಟುಕೊಂಡಿದ್ದಳು. ಮೊದಲೇ ಪೈರ್ ಬ್ರಾಂಡ್ ಅರುಣ್ ಶೌರಿ, ಅವಳು ಚಿಕ್ಕ ಹುಡುಗಿ ಅನ್ನೊದನ್ನ ಮರೆತು ಝಾಡಿಸಿಬಿಟ್ಟಿದ್ದಾರೆ, ಹಿಂದೊಮ್ಮೆ ಪರ್ತಕರ್ತನಾಗಿದ್ದ ಶೌರಿ ಅವರಿಗೆ ಈಗಿನ ಎಲೆಕ್ಟ್ರಾನಿಕ್ ಮಾದ್ಯಮಗಳ ಕಾರ್ಯವೈಖರಿ ಬಗ್ಗೆ ಸಿಕ್ಕಾಪಟ್ಟೆ ಅಸಹನೆ ಇದ್ದ ಹಾಗೆ ಕಾಣುತ್ತಿತ್ತು. ಪಾಪ ಆ ಹುಡುಗಿ ದಿನಾ ಮಾಡೋದನ್ನೆ ಶೌರಿ ಮುಂದೆ ಮಾಡಿದಾಳೆ ಅವಳದೇನು ತಪ್ಪು....!

ಅವಳನ್ನು ನಿಯಂತ್ರಿಸೋ ಡೆಸ್ಕ್ ಇಂಚಾರ್ಜ್ ಅದನ್ನೇ ಬೇಕು ಅಂತ ಕೇಳಿರ್ತಾನೆ. 'ಗೆಟ್ ಸಮ್ ರಿಯಾಕ್ಷನ್ ಪಾರ್ ವರುಣ್ ಲಾಲೂ ಸ್ಟೇಟ್ ಮೆಂಟ್ 'ಅಂತ. ಅದಕ್ಕಂತ ಆಯಮ್ಮ ಸ್ವಲ್ಪಾನು ಯೋಚಿಸದೇ ಎದುರು ಸಿಕ್ಕ ಬೆಜೆಪಿ ನಾಯಕ ಅರುಣ್ ಶೌರಿ ಬೈಟ್ ಕೇಳಿದ್ದಾಳೆ.
ಅದೇ ರವಿಶಂಕರ್ ಪ್ರಸಾದ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್ ಕುಮಾರ್ ಅಂತ ಮೀಡಿಯಾ ಸೇವಿ ನಾಯಕರ ಹತ್ತಿರ ಬೈಟ್ ಕೇಳಿದ್ರೆ ಬರೇ ಬೈಟ್ ಯಾಕೆ ಸಂದರ್ಶನವೇ ಸಿಕ್ಕಿರೋದು...!

ಆದರೆ ವಾಸ್ತವ ಏನಪ್ಪಾದನ್ನ ಅರುಣ್ ಶೌರಿ ಸಿಟ್ಟಿನಲ್ಲಿ ಗಂಬೀರವಾದ ಅರ್ಥ ಇದೆ. ಇಂಡಿಯಾದ ಎಲೆಕ್ಟ್ರಾನಿಕ್ ಮಾದ್ಯಮ ಪ್ರಾಕ್ಟೀಸ್ ಮಾಡ್ತಾ ಇರೋ ವರದಿಗಾರಿಕೆ ಸರೀನಾ ಅನ್ನೊದು. ಯಾಕಂದರೆ ಇವತ್ತು ಪೊಲಟಿಕಲ್ ವರದಿಗಾರಿಕೆ ಅಂದರೆ ಏನು..? ರಾಜಕೀಯ ನಾಯಕರಿಂದ ಬೈಟ್ ತೆಗೆದುಕೊಂಡು ಬರೋದು, ಅದು ಎಂತಾ ಬೈಟು ಬೇಕು ಅಂದರೆ, ಅದಕ್ಕೆ ವಿರೋಧಿಪಕ್ಷದವನು ಕೆರಳಿ ಪ್ರತಿಕ್ರಿಯೆ ನೀಡುವಸ್ಟು ಸ್ಟ್ರಾಂಗ್ ಆಗಿರಬೇಕು. ಇಲ್ಲಾ ಅಂದರೆ ಅದು ಉಪಯೋಗಕ್ಕೆ ಬರಲ್ಲ ಅನ್ನೊದು ಈಗಿನ ನ್ಯೂ ಜರ್ನಲಿಸಂ.

ಬೈಟ್ ನಲ್ಲಿ ಏನಿರಬೇಕು ಬೈಗುಳ ಬೇಕು, ಮತ್ತೊಬ್ಬರನ್ನ ಅವಮಾನಿಸಬೇಕು, ಕೆರಳಿಸಬೇಕು, ಇಲ್ಲಾ ತೆಗಳಬೇಕು, 'ಇಲ್ಲಾರಿ ನಾನು ಮತ್ತೊಬ್ಬರ ಬಗ್ಗೆ ಮಾತಾಡಲ್ಲಾ ರೀ ಅಂದರೆ' ಆ ನಾಯಕ ವೇಸ್ಟ್, ಟಿಆರ್ ಪಿ ತಂದುಕೊಡದ ಪುರಾಣ, ಹರಿಕತೆ. ಒಳ್ಳೇ ಯೋಚನೆ, ಅಭಿವೃದ್ದಿ ಕೆಲಸ ಯಾವುದೂ ಬೇಡ ಬೇಕಿರೋದು ಸ್ಪೈಸಿ ಬೈಟ್ .
.
ಬೈಟ್ ಯಾವಾಗಲೂ ಸಮ್ ಥಿಂಗ್ ಸ್ಪೈಸಿ ಇರಬೇಕು...

ಪತ್ರಕರ್ತರನ್ನ ಅರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಕಾಂಟ್ರೋವಸಿ ಬೈಟ್ ಕೊಡುವ ರಾಜಕೀಯ ವ್ಯಕ್ತಿ ಗಳು ಅಂದ್ರೆ ಜರ್ನಲಿಸ್ಟ್ ಗಳಿಗೂ ಖುಷಿ. ಅವರ ಹಿಂದೆ ದಿನಾಲೂ ಬೀಟ್, ಅವರು ಹೇಳಿದ್ದೆಲ್ಲಾ ನ್ಯೂಸ್.
ಅದೇ ಬೈಟ್ ಕೊಟ್ಟ ವ್ಯಕ್ತಿ, ನಾಳೆ ನಾನು ಹಾಗೆ ಹೇಳಿಲ್ಲಾ ಅದೆಲ್ಲಾ ಮಾದ್ಯಮದವರ ಸೃಷ್ಠಿ ಅಂದರೂ ಬೇಜಾರಿಲ್ಲಾ. ಹಳೇ ಬೈಟ್ ಮತ್ತು ಹೊಸ ಬೈಟ್ ಸೇರಿಸಿ ಮಾಸಾಲ ಅರೆದರೆ ಒಳ್ಳೇ ಟಿಆರ್ ಪಿ ಬರುತ್ತೆ ಚಾನಲ್ಲಿಗೆ. ಬೈಟ್ ಜರ್ನಲಿಸಂ ಅಂದ್ರೆ ಸುಳಿವು ಸಿಕ್ಕಿತಲ್ಲಾ.

ಅದು ಬಿಡಿ ಸದ್ಯಕ್ಕೆ ಚಾಲ್ತಿಯಲ್ಲಿರೊ ಇನ್ನೊಂದು ಜರ್ನಲಿಸಂ ಇದೆ ಅದು ಇನ್ವಸ್ಟಿಗೇಟೀವ್ ಜರ್ನಲಿಸಂ. ಹಾಗಂದ್ರೆ ಹೊಸ ಅರ್ಥನೇ ಇದೆ.
ಈಗ ಇನ್ವೆಸ್ಚಿಗೇಟೀವ್ ಜರ್ನಲಿಸಂ ಅಂದರೆ ಏನಪ್ಪಾ ಅಂದರೆ ರಾಜಕಾರಣಿಗಳು, ಉದ್ಯಮಿಗಳು, ಮತ್ತಿತರ ಒತ್ತಡ ಗುಂಪುಗಳು ತಮಗೆ ಆಗದವರ, ತಮ್ಮ ವಿರೋಧಿಗಳ ಬಗ್ಗೆ ಖುದ್ದು ಮಾಹಿತಿ, ಸಿಡಿ, ದಾಖಲೆ, ಕಡೆಗೆ ಒಂದು ಬೈಟು ಎಲ್ಲಾ ಅವರೇ ಒದಗಿಸಿದರೆ. ಅದು ಇನ್ವೆಸ್ಟಿಗೇಶನ್ ರಿಪೋರ್ಟ್.

ಬಹುಶ ಅರುಣ್ ಶೌರಿ ಆರ್ಕೋಶ ಎಲಕ್ಟಾನಿಕ್ ಮಾದ್ಯಮ ತೀರಾ ದಾರಿತಪ್ಪಿದ ಸ್ಥಿತಿಗೆ ತಲುಪಿದ್ದಕ್ಕೆ ಸಿಕ್ಕ ಪ್ರತಿರಕ್ರಿಯೆ . ಮಿಡಿಯಾಗಳು ದಾರಿತಪ್ಪಿವೆ ಅನ್ನೊದು ಗೋಚರಿಸ್ತಾ ಇದೆ, ಆದರೂ ಕೆಲವು ಚಾನಲ್ ಗಳು ಕಾಲನ ಹೊಡೆತಕ್ಕೆ ಸಿಕ್ಕಿಯೂ ಬದುಕಿವೆ. ಮಾದ್ಯಮ ಬೀಡುಬೀಸಾಗಿ ಬೆಳೆಯುತ್ತಿದೆ ಯಾರ್ಯಾರ ಕೈಲೋ ಸಿಕ್ಕಿ ನಲುಗುತ್ತಿವೆ. ಅದಕ್ಕೆ ಸದ್ಯಕ್ಕೆ ಅಂತ್ಯ ಇದ್ದಂತೆ ಕಾಣುತ್ತಾ ಇಲ್ಲ. ಕನ್ಟ್ರಕ್ಚೀವ್ ಮಾದ್ಯಮ ಅನ್ನೊ ಕಲ್ಪನೆ ಇಲ್ಲಿಗೆ ಇಲ್ಲಿಗೆ ಇನ್ನೂ ಬಂದಂತೆ ಕಾಣೊಲ್ಲ.
ಬೇರೆ ಬೇರೆ ದೇಶಗಳ ಮಾದ್ಯಮಗಳು ಈಗಾಗಲೇ ಆ ಸ್ಥಿತಿ ತಲುಪಿ ಆಚೆ ಬಂದಿವೆ ಈಗ ಬಿಬಿಸಿಯನ್ನಾಗಲಿ, ಸಿಎನ್‌ಎನ್ ಆಗಲಿ, ಆಸ್ಟ್ರೇಲಿಯಾ ನ್ಯೂಸ್ ಆಗಲಿ ನೋಡಿದರೆ ಅಲ್ಲಿ ನಮ್ಮಂತೆ ಇಲ್ಲ, ಅಲ್ಲಿ ಟೀವಿ ಅ?ಯಂಕರ್ ಗಳು ನಮ್ಮವರ ಹಾಗೆ ಕಿರುಚುವುದಿಲ್ಲ, ಸಂದರ್ಶನಗಳಲ್ಲಿ ಗಲಾಟೆ ಇರಲ್ಲ.

ಕಾರ್ಯಕ್ರಮಕ್ಕೆ ರೋಚಕತೆ ಬೇಕಿಲ್ಲ, ಸೀರಿಯಸ್ ನೆಸ್ ಬೇಕು ಅಲ್ಲಿನ ರಾಜಕೀಯ ನಾಯಕರೂ ಯಾರೂ ನಮ್ಮವರಂತೆ ಬೈಟ್ ಕೊಡಲ್ಲ. ನಾವೆಲ್ಲ ಈಗ ಅದನ್ನೆಲ್ಲಾ ಯೋಚಿಸಬೇಕಿದೆ, ಜನಕ್ಕೆ ಟಿವಿ ನ್ಯೂಸ್ ನಲ್ಲಿ ಸೆಕ್ಸ್ ಪಿಲ್ಂ ಬೇಕು ಅಂತ ಅನ್ನಿಸಿದರೆ ಕೊಡೋಕೆ ಸಾದ್ಯನಾ. ಅದರಿಂದ ಟಿಆರ್ ಪಿ ಬರುತ್ತಲ್ಲಾ.

ಜನಕ್ಕೆ ಏನು ಬೇಕೋ ಅದನ್ನ ಕೊಡ್ತಿವಿ ಅನ್ನೊ ವಾಧದಲ್ಲಿ ಹುರುಳಿಲ್ಲ, ಜನ ಅದನ್ನೇ ನೊಡ್ತಾರಲ್ರೀ ಅದಕ್ಕೆ ಬೆಲೆ ಇರೋದು ಅಂದ್ರೆ ತಪ್ಪಾಗುತ್ತೆ, ಜನಕ್ಕೂ ಒಂದು ದಿನ ಎಲ್ಲಾ ಅರ್ಥ ಆಗುತ್ತೆ. ಕಾಯಬೇಕು ಅಷ್ಟೇ...


4 comments:

surya said...

ಶ್ರೀನಿವಾಸ್, ತಾವು ಬರೆದದ್ದು ಅತ್ಯಂತ ವಾಸ್ತವ ಮಾಧ್ಯಮ ವಿದ್ಯಮಾನ.ಮುದ್ರಣ ಮಾಧ್ಯಮದವರನ್ನು ಬಹಳ ಸುಲಭವಾಗಿ ಬಿಟ್ಟುಬಿಟ್ಟಿದ್ದೀರ. ಟೀವಿ ಛಾನೆಲ್ಗಳು ಮಾಡುವಷ್ಟು ರಂಪ ಮಾಡದಿದ್ರೂ ಈ ಭಾನಗಡಿಯಲ್ಲಿ ಪೇಪರ್ನೋರೂ ಭಾಗಿ ಅನಿಸುತ್ತೆ.
-ಉಮಾಪತಿ
ದೆಹಲಿ.

ಅರಕಲಗೂಡುಜಯಕುಮಾರ್ said...

ಶ್ರೀನಿವಾಸ ಗೌಡ್ರೆ,ಲೇಖನ ಚೆನ್ನಾಗಿದೆ, ಎಲೆಕ್ಟ್ರಾನಿಕ್ ಮಾದ್ಯಮಗಳು ಸುದ್ದಿ ಸೃಷ್ಟಿಸುವ ಹಪಾಹಪಿಗೆ ಬಿದ್ದಾಗ ಇಂಥಹ ಎಡವಟ್ಟುಗಳಾಗುತ್ತವೆ. ಅದು ಗ್ರಹಿಕೆಯ ಕೊರತೆ ಇರುವ ವರದಿಗಾರನಿಂದ ಮಾತ್ರ ಹೀಗಾಗುವುದಿಲ್ಲ, ಡೆಸ್ಕ್ ನಲ್ಲಿ ಕೂರುವ ಕೋಡಂಗಿಗಳಿಗೆ ಫೀಲ್ಡ್ ನಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಅರಿವು ಇರುವುದಿಲ್ಲ ಹಾಗಾಗಿ ಅವರೆ ಇಂಥಹ ಸಂಧರ್ಭಗಳಿಗೆ ಕಾರಣಕರ್ತರಾಗುತ್ತಾರೆ. ಮುದ್ರಣ ಮಾಧ್ಯಮದವರೇನು ಈ ವಿಚಾರದಲ್ಲಿ ಕಡಿಮೆ ಎಂದು ಕೊಳ್ಳಬೇಕಿಲ್ಲ ಕೂತು ಉಣ್ಣೋನಿಗೆ ಕೇಡೇನು ಎಂಬಂತೆ ಏನಾದರೊಂದು ಹೊಸ ಆಲೋಚನೆ ಹೊಳೆದವರಂತೆ ಸಂಜೆ ನನಗೆ ಇಂತಿಂಥ ಸುದ್ದಿ ಬೇಕು ಎಂದು ಕಟ್ಟಪ್ಪಣೆ ಮಾಡುವುದಲ್ಲದೇ ಉಪದೇಶ ಬೇರೆ ಮಾಡುತ್ತಾರೆ. ಫೀಲ್ಡ್ ನಲ್ಲಿ ಕೆಲಸ ಮಾಡೋ ವರದಿಗಾರನ ಸ್ಥಿತಿ ಅವರಿಗೇನು ಗೊತ್ತಿರುತ್ತೆ ಅಲ್ವಾ?

ಶ್ರೀನಿವಾಸಗೌಡ said...

ಈ ಸುದ್ದಿ ಮಾತು ತುಂಬಾ ಅಪಾಯಕಾರಿ ಬ್ಲಾಗ್ ನೋಡ್ರಪ್ಪಾ, ಯಾರೂ ನೋಡದೆ ಅನಾಥವಾಗಿದ್ದ ಖಾಸಗೀ ಡೈರಿಯನ್ನ ಒಂದೇ ದಿನ ನೂರಕ್ಕೂ ಹೆಚ್ಚು ಜನ ನೋಡುವಂತೆ ಮಾಡಿದೆ ಸುದ್ದಿಮಾತು.

ನಿನ್ನೆ ಸುದ್ದಿಮಾತಿನವರು ನನ್ನ ಬರಹವನ್ನ ಹೆಸರು ಹಾಕಿ ಪ್ರಕಟಿಸಿದಾಗ ನಾನು ನಿಜಕ್ಕೂ ಗಾಭರಿಯಾಗಿದ್ದೆ, ಯಾರ್ಯಾರು ಬಂದು ಬಾಯಿಗೆ ಬಂದಂತೆ ಉಗಿತಾರೇ ಅಂತ ಆದರೆ ಸದಭಿರುಚಿಯ ಮಾದ್ಯಮದ ಗೆಳೆಯರು ಒಳ್ಳೋಳ್ಳೆ ಪ್ರತಿಕ್ರಿಯೆಗಳನ್ನು ಬರೆದು ನಂಗೆ ಮತ್ತಷ್ಠು ಹುರುಪು ತಂದುಕೊಟ್ಟಿದ್ದಾರೆ.

ದೆಹಲಿಯಲ್ಲಿ ನನ್ನ ಸಹೋದ್ಯೋಗಿಗಳು, ಹಿರಿಯರೂ ಆದ ಕನ್ನಡಪ್ರಭದ ಉಮಾಪತಿಯವರು ಕಾಮೆಂಟ್ ಹಾಕಿದ್ದಾರೆ, ನಂಗೆ ಸಂತೋಷವಾಗಿದೆ..
ಈ ಸುದ್ದಿಮಾತಿನ ಬಾಯಿಗೆ ನಾನು ಯಾವತ್ತು ಸಿಕ್ಕಿಕೊಳ್ತಿನಿ ಅಂತ ಭಯಪಟ್ಟಿದ್ದೆ ಆದರೆ ನನ್ನ ಲೇಖನ ಪ್ರಕಟಿಸಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಅವರಿಗೆ ನನ್ನ ಮನಪೂರ್ವಕ ದನ್ಯವಾದ....

ಪತ್ರಕರ್ತ... said...

ಸುದ್ದಿಮಾತಿನ ಒಡೆಯರಿಗೆ ನಮಸ್ಕಾರ. ಏನ್ ಯಾವುದು ತನಿಖಾ ಸುದ್ದಿ ಅಥವಾ ಅವರಿವರ ಬಗ್ಗೆ ಬರಿಯೋಕೆ ಮಾಹಿತಿ ಸಿಗ್ಲಿಲ್ಲ ಅಂತ. ನಮ್ ಗೌಡರ ಬ್ಲಾಗ್ ಟಿ. ಆರ್.ಪಿ. ಹೆಚ್ಚಿಸೋಕೆ ಅಂತಾನೇ ಇಲ್ಲಿ ಅವರ ಬ್ಲಾಗ್ ನಲ್ಲಿರೋದನ್ನ ತೆಗೆದು ಹಾಗ್ಕಿದ್ದೀರೋ ಹೇಗೆ?