Tuesday, September 30, 2008

ಮಠ, ಮಾಲ್ ಮತ್ತು ವಿ.ಕ.ಗೋಲ್ಮಾಲ್...

ಗರುಡ ಮಾಲ್ ನ ಉದಯ ಗರುಡಾಚಾರ್ ಈಗ ಸುದ್ದಿಯಲ್ಲಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈಜಿಪುರದಲ್ಲಿ ಬಡವರಿಗಾಗಿ ಮನೆ ಕಟ್ಟುವ ನೆಪದಲ್ಲಿ ಬೆಲೆಬಾಳುವ ಸರಕಾರಿ ಜಾಗ ಗುಳುಂ ಮಾಡಿಕೊಳ್ಳಲು ಅವಕಾಶ ಇರುವ ಯೋಜನೆಯೊಂದನ್ನು ತಮ್ಮ ಒಡೆತನದ ಮಾವೆರಿಕ್ ಹೋಲ್ಡಿಂಗ್ಸ್ ಕಂಪನಿಗೆ ಪಡೆದುಕೊಂಡಿದ್ದಾರೆ. ಇದು ಸಾಧ್ಯವಾದದ್ದು, ಉದಯ್ ಚುನಾವಣೆಗೆ ಮುನ್ನ ಬಿಜೆಪಿ ಸೇರಿದುದರ ಪರಿಣಾಮ ಎಂದು ಯಾರೂ ಅಲ್ಲಗಳೆಯಲಾರರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದಾಗ ಪಕ್ಷ ಇಂತಹ ಯೋಜನೆ ಆಸೆ ತೋರಿಸಿ ಸುಮ್ಮನಿರಿಸಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಬೇಕಿಲ್ಲ.
ವಿಜಯ ಕರ್ನಾಟಕ ದಿನಪತ್ರಿಕೆ ಈ ವಿಚಾರ-ವಿವಾದವನ್ನು ಸವಿವರವಾಗಿ ಪ್ರಕಟಿಸಿತು. 3-4 ದಿನಗಳ ಕಾಲ ಮುಖಪುಟದ ಪ್ರಮುಖ ಸುದ್ದಿಯನ್ನಾಗಿಸಿ ಸುದ್ದಿ ಪ್ರಕಟಿಸಿ ವಿರೋಧ ಪಕ್ಷದವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಫಲವಾಗಿ ಕಾಂಗ್ರೆಸ್ ದನಿ ಎತ್ತಿತ್ತು. Of course, ಇದೆಲ್ಲಕ್ಕೂ ಮೊದಲೇ ಮಾಜಿ ಪ್ರಧಾನಿ ದೇವೇಗೌಡರು ಈಜಿಪುರಕ್ಕೆ ಭೇಟಿ ನೀಡಿ ಅಲ್ಲಿನ ಸಂಪೂರ್ಣ ಜಾಗ ಬಡವರ ಮನೆಗಾಗಿ ಮೀಸಲಿಡಬೇಕು ಎಂದು ಆಗ್ರಹಿಸಿದರು. ಆಯಕಟ್ಟಿನ ಜಾಗದಲ್ಲಿ ಬಹುಕೋಟಿ ಮೌಲ್ಯದ ಸರಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಯೊಬ್ಬ ಪಡೆಯುವ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ ವಿಜಯ ಕರ್ನಾಟಕ ಕಾರ್ಯ ಶ್ಲಾಘನೀಯ.
ಅದಿರಲಿ. ಒಂದು ಕ್ಷಣ ಈಜಿಪುರ ಸುದ್ದಿಯನ್ನು ಪಕ್ಕಕ್ಕಿಟ್ಟು, ಗೋಕರ್ಣಕ್ಕೆಬರೋಣ.
ಗೋಕರ್ಣದ ದೇವಾಲಯವೂ ಸರಕಾರದ ಆಸ್ತಿ. ವರ್ಷವೊಂದಕ್ಕೆ ಲಕ್ಷಾಂತರ ಆದಾಯ ತರುತ್ತಿದ್ದ ಪ್ರಮುಖ ದೇವಾಲಯ. ರಾಮಚಂದ್ರಾಪುರ ಮಠದವರು ಬಯಸಿದರು ಎಂದಾಕ್ಷಣ ಸರಕಾರ ಆ ದೇವಾಲಯವನ್ನು ಹಸ್ತಾಂತರಿಸುವ ನಿರ್ಧಾರ ತೆಗೆದುಕೊಂಡಿತು. ಆ ಊರಿನಲ್ಲಿ ಈ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿ ಧರಣಿ, ಪ್ರತಿಭಟನಾ ಮೆರವಣಿಗೆ ಮಾಡಿದರೆ ವಿಜಯ ಕರ್ನಾಟಕದಲ್ಲಿ ಒಂದು ಕಾಲಂ ಸುದ್ದಿಯಿಲ್ಲ. ಪತ್ರಿಕೆ ರಾಮಚಂದ್ರಾಪುರ ಮಠದ ಪರವಾಗಿ ನಿಂತಿತು. ಪರವಾಗಿ ಎಂದರೆ ಕಡಿಮೆಯಾದೀತು; ಮಠದ ಮುಖವಾಣಿಯಾಯಿತು ಎನ್ನಬೇಕು. ಆ ಊರಿನಲ್ಲಿ ಹಸ್ತಾಂತರಕ್ಕೆ ಯಾರ ವಿರೋಧವೂ ಇಲ್ಲ ಎಂದು ಘೋಷಿಸಿತು. ಒಂದು ಪತ್ರಿಕೆ ಹೀಗೆ ಒಂದು ಸಮುದಾಯದ ಅಸ್ತಿತ್ವವನ್ನೇ ಧಿಕ್ಕರಿಸಿತು.
ಗೋಕರ್ಣದ ಅಭಿವೃದ್ಧಿಗಾಗಿ ಹಸ್ತಾಂತರ ಅನಿವಾರ್ಯ ಎನ್ನುವಂತಹ ವರದಿಗಳು ಪ್ರಕಟವಾದವು. ಇದಪ್ಪಾ ತಮಾಷೆ ಅಂದರೆ. ಜನರಿಂದ ಚುನಾಯಿತರಾದ ಸರಕಾರ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಎಂ.ಎಲ್ಎ ಎಲ್ಲರೂ ಇರುವಾಗ ಪಟ್ಟಣದ ಅಭಿವೃದ್ಧಿಗೆ 'ಗೋ ರಕ್ಷಣೆ' ಎಂಬ ಅಸ್ಪಷ್ಟ, ಅಸಂಬದ್ಧ ಕ್ಯಾಂಪೇನ್ ಮಾಡುತ್ತಿರುವ ಸ್ವಾಮೀಜಿಯ ಮೊರೆ ಹೋಗುವುದು ಪ್ರಜಾಪ್ರಭುತ್ವವನ್ನೇ ಲೇವಡಿ ಮಾಡಿದಂತೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಧಾಟಿಯಲ್ಲಿ ಮಾತನಾಡಿದ್ದು ಅವರ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತದೆ. ಅವರ ಅಭಿಪ್ರಾಯ ನಿಜವೇ ಆಗಿದ್ದಲ್ಲಿ ಒಂದೊಂದು ಪಟ್ಟಣದ ಅಭಿವೃದ್ಧಿಯನ್ನು ಒಂದೊಂದು ಪಟ್ಟಣಕ್ಕೆ ವಹಿಸಿ ಮುಖ್ಯಮಂತ್ರಿ ಮನೆ ಸೇರುವುದು ಒಳಿತು!
ಪ್ರಶ್ನೆ ಇಷ್ಟೆ. ವಿಜಯ ಕರ್ನಾಟಕ ದೇವಾಲಯ ಹಸ್ತಾಂತರ ವಿಚಾರದಲ್ಲಿ ಹಠಕ್ಕೆ ಬಿದ್ದು ಮಠದ ಪರ ನಿಂತದ್ದೇಕೆ? ಈಜಿಪುರದ ಸರಕಾರಿ ಜಮೀನನ್ನು ಕಬಳಿಸಲು ಬಿಡದ ಪತ್ರಿಕೆ ದೇವಾಲಯವನ್ನು ಮಠಕ್ಕೆ ಕೊಡುವಾಗ ಸರಕಾರಕ್ಕೆ ಸಾಥ್ ನೀಡಿದ್ದೇಕೆ?
ಇಲ್ಲಿ ಸ್ಷಷ್ಟವಾಗುವ ವಿಚಾರವೆಂದರೆ, ಮಠಕ್ಕೆ ದೇವಾಲಯ ಹಸ್ತಾಂತರಿಸುವಲ್ಲಿ ಪತ್ರಿಕೆ, ಅದರ ಸಂಪಾದಕರ ಹಿತಾಸಕ್ತಿ ಇತ್ತು. ಅಂತೆಯೇ ಉದಯ ಗರುಡಾಚಾರ್ ಗೆ ಸರಕಾರಿ ಜಮೀನು ತಪ್ಪಿಸಬೇಕೆಂಬ ಯಾವುದೋ ಶಕ್ತಿ ಪತ್ರಿಕೆಯನ್ನು ಹೀಗೆ ಆಡಿಸಿತ್ತು.
ಪತ್ರಿಕೆ ತೀವ್ರ ಕಾಳಜಿಯಿಂದ ಬಡವರ ಜಮೀನಿನ ಪರವಾಗಿ ನಿಂತಿದೆ ಎಂದು ಭಾವಿಸಿದರೆ ಅದು ಓದುಗರ ದಡ್ಡತನವಲ್ಲದೆ ಮತ್ತೇನಲ್ಲ. Of course, ಪತ್ರಿಕೆ ಅಂದುಕೊಂಡಂತೆ ಓದುಗರು ದಡ್ಡರೇನಲ್ಲ!

1 comment:

Anonymous said...

ಖಂಡಿತಾ... ಒದುಗ ಪ್ರಭುಗಳು ಈಗೀಗ ತುಂಬಾ ಬುದ್ದಿವಂತರು. ಯಾವುದೇ ಒಂದು ಪತ್ರಿಕೆ ಅಥವಾ ಸುದ್ದಿವಾಹಿನಿಯ ಪ್ರಭಾವಕ್ಕೆ ಒಳಗಾಗುವರಲ್ಲ. ಏನೇ ಆಗ್ಲೀ,,, ಕೊನೆಗಾದ್ರೂ ಪತ್ರಿಕೆ ತಾನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅನ್ನೋದನ್ನ ಸ್ವಲ್ಪ ಮಟ್ಟಿಗಾದ್ರೂ ತೋರಿಸಿಕೊಳ್ಳೋ ಪ್ರಯತ್ನ ಮಾಡಿರೋದು ಖುಷಿ ತಂದಿಟ್ಟಿತು. ಪತ್ರಿಕೆ ಕೈಗೆ ಎತ್ತಿಕೊಂಡ ಕೂಡ್ಲೆನೇ ಯಾವುದು ಚೆಡ್ಡಿ ಪರ ಹಾಗೂ ಚಡ್ಡಿಗಳ ಪ್ರಭಾವದಿಂದ ವ್ಯತಿರಿಕ್ತವಾಗಿರುವ ವರದಿ ಅಂತ ಗೋತ್ತಾಗುವಷ್ಟು ಬುದ್ದಿವಂತಿಕೆ ಎಲ್ಲರಿಗೂ ಇದೆ. ಆದ್ರೆ ಏನ್ಮಾಡೋದು ಕೆಲವಷ್ಟು ಪತ್ರಕರ್ತರಿಗೆ ಸಮಾಜದ ಬಗ್ಗೆ ಕಾಳಜಿ ಇಲ್ಲ... ಅದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.