Tuesday, October 14, 2008

ಪ್ರಜಾವಾಣಿಗೆ ಈಗ ವಯಸ್ಸಾಗಿದೆ...!

ಪ್ರಜಾವಾಣಿಗೆ ಈಗ ವಯಸ್ಸಾಗಿದೆ. ಇಂದಿಗೆ ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು ಎಂದು ಪತ್ರಿಕೆ ಮುಖಪುಟ ಸಂಪಾದಕೀಯ ಹೇಳುತ್ತದೆ. ಪತ್ರಿಕೆ ನಾಡಿನ ಜನತೆಯ ಹೆಮ್ಮೆಯ ಕೂಸಾಗಿ ಬೆಳೆಯುತ್ತ ಈಗ ಪ್ರಬುದ್ಧತೆಯ ಹಂತಕ್ಕೆ ತಲುಪಿದೆ ಎಂದು ಸನ್ಮಾನ್ಯ ಸಂಪಾದಕರು ಬರೆದಿದ್ದಾರೆ.
ಇಂದಿನ ಮುಖಪುಟ ಸಂಪಾದಕೀಯ ಬರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪತ್ರಿಕೆ ನಿಜಕ್ಕೂ ಪ್ರಬುದ್ಧ ಹಂತಕ್ಕೆ ತಲುಪಿದೆಯೇ, ಎಂಬ ಸಂಶಯ ಕಾಡುತ್ತದೆ.
ಪತ್ರಿಕೆ ಭಾಷೆಯ ಮುಖ್ಯ ಉದ್ದೇಶ ಓದುಗರನ್ನು ಸುಲಭವಾಗಿ ತಲುಪುವುದು. ಅಂತೆಯೇ ಕಾಲಕಾಲಕ್ಕೆ ಪತ್ರಿಕೆ ತನ್ನ ಭಾಷೆ ಬಳಕೆ ಸುಧಾರಿಸಿಕೊಂಡು ಓದುಗರನ್ನು ತಲುಪಬೇಕು. ಆದರೆ ಪ್ರಜಾವಾಣಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದಂತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಂದಿನ ಮುಖಪುಟ ಸಂಪಾದಕೀಯ!
ಮೊದಲ ವಾಕ್ಯ ಗಮನಿಸಿ ಇವತ್ತಿಗೆ ಸರಿಯಾಗಿ ೬೧ ವರ್ಷಗಳ ಹಿಂದೆ ಕರ್ನಾಟಕವು (ಅಂದಿನ ಮೈಸೂರು ರಾಜ್ಯವು), ನಾಡಿನ ಜನತೆಯ ಶಕ್ತಿಯುತ ದನಿಯಾಗಿ ಪ್ರಜಾವಾಣಿ ದಿನಪತ್ರಿಕೆ ಜನ್ಮ ತಳೆಯಲು ಸಾಕ್ಷಿಯಾಯಿತು.
ಈ ವಾಕ್ಯದ ಹಿಂದಿನ ಉದ್ದೇಶ - ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು ಎನ್ನುವುದನ್ನು ಓದುಗರಿಗೆ ತಿಳಿಸುವುದು. ಈ ಸಣ್ಣ ಸಂಗತಿ ಹೇಳಲು ಸಂಪಾದಕರು ಅದೆಷ್ಟು ಸರ್ಕಸ್ ಮಾಡಿದ್ದಾರೆ ನೋಡಿ. ಒಟ್ಟು ೧೯ ಪದಗಳು ಹಾಗೂ ಒಂದು ಕಂಸ (brackets) ಬಳಕೆಯಾಗಿವೆ. ಅದೇ ಮಾತನ್ನು ತೀರಾ ಸರಳವಾಗಿ ಇಂದಿಗೆ ಪ್ರಜಾವಾಣಿ ಪತ್ರಿಕೆ ಆರಂಭವಾಗಿ ೬೧ ವರ್ಷಗಳಾದವು... ಎಂದು ಹೇಳುತ್ತಾ ಸಂಪಾದಕೀಯ ಆರಂಭಿಸುತ್ತಿತ್ತಲ್ಲವೆ?
ಇನ್ನೊಂದು ವಾಕ್ಯ ಗಮನಿಸಿ ಪತ್ರಿಕೆಯ ಮೊದಲ ಸಂಪಾದಕ ಬಿ. ಪುಟ್ಟಸ್ವಾಮಯ್ಯ ಸಂಪಾದಕತ್ವದಿಂದ ಆರಂಭಗೊಂಡು ಪ್ರಜಾವಾಣಿಯು ಈಗ ದೊಡ್ಡ ಮಾಧ್ಯಮ ಸಮೂಹವಾಗಿ ಬೆಳೆದಿದೆ.
ಒಂದು ಪದ ಒಂದೇ ವಾಕ್ಯದಲ್ಲಿ ಎರಡು ಬಾರಿ ಬರುವುದು ಉತ್ತಮ ಬರವಣಿಗೆಯ ಲಕ್ಷಣವಲ್ಲ ಎಂಬುದು ಎಡಿಟಿಂಗ್‌ನ ಪ್ರಥಮ ಪಾಠಗಳಲ್ಲಿ ಒಂದು. ಪ್ರಜಾವಾಣಿ ಪತ್ರಿಕೆಗೆ ಇಂಟರ್ನ್‌ಷಿಪ್‌ಗೆಂದು ಬಂದ ವಿದ್ಯಾರ್ಥಿಯೊಬ್ಬ ಇಂತಹ ಬರಹ ಬರೆದಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಈ ವಾಕ್ಯ ಬರೆದಿರುವುದು ೬೧ ವರ್ಷ ಇತಿಹಾಸ ಇರುವ ಪತ್ರಿಕೆ ಸಂಪಾದಕರು!
ಮತ್ತೊಂದು ವಾಕ್ಯ ಗಮನಿಸಿ ತಾಲೂಕು, ಜಿಲ್ಲೆ ಸೇರಿದಂತೆ ದೇಶದ ಎಲ್ಲ ಭಾಗಗಳು ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ವರದಿಗಾರರು ಕೊಡುವ ಗ್ರಾಮೀಣ ಪ್ರದೇಶದ ತಳಮಟ್ಟದ ಸುದ್ದಿಗಳಿಂದ ಹಿಡಿದು ಅಂತರ್‌ರಾಷ್ಟ್ರೀಯ ಆಗು ಹೋಗುಗಳವರೆಗೆ ವೈವಿಧ್ಯಮಯ ಸುದ್ದಿಗಳನ್ನು ಪತ್ರಿಕೆ ಉಣಬಡಿಸುತ್ತಿದೆ.
ಈ ವಾಕ್ಯ ಓದಿ ಅರಗಿಸಿಕೊಳ್ಳುವುದೇ ಒಂದು ಪ್ರಯಾಸದ ಕೆಲಸ. ಎಡಿಟಿಂಗ್ ಎನ್ನುವುದರ ಕುರುಹೇ ಇಲ್ಲೇಲ್ಲೂ ಇಲ್ಲ. ಈ ವಾಕ್ಯವನ್ನು ಸರಳವಾಗಿ - ಸುತ್ತಲ ಜಗತ್ತಿನ ಎಲ್ಲ ಆಗುಹೋಗುಗಳನ್ನು ಪತ್ರಿಕೆ ಓದುಗರಿಗೆ ನೀಡುತ್ತಿದೆ ಹೇಳಬಹುದಿತ್ತಲ್ಲವೇ?
ಇನ್ನು ಬರಹದ ಕೊನೇ ವಾಕ್ಯ - ಪತ್ರಿಕೋದ್ಯಮದ ಉನ್ನತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ಈ ವಿಶೇಷ ಸಂದರ್ಭದಲ್ಲಿ ಮತ್ತೊಮ್ಮೆ ಮರು ಸಮರ್ಪಣೆ ಮಾಡಿಕೊಳ್ಳುತ್ತೇವೆ. ಮತ್ತೊಮ್ಮೆ ಮರು ಸಮರ್ಪಣೆ ಅಂದರೆ!!
ಸಂಪಾದಕೀಯ ಬರದ ವಿನ್ಯಾಸವಂತೂ ದೇವರಿಗೇ ಪ್ರೀತಿ. ಕಲರ್ ಕೆಮಿಸ್ಟ್ರಿ ಪ್ರಜಾವಾಣಿಗೆ ಇಷ್ಟು ವಯಸ್ಸಾದರೂ ಅರ್ಥವಾದಂತಿಲ್ಲ. ಬರಹದ ಶೀರ್ಷಿಕೆ ೬೧ ಸಂವತ್ಸರಗಳ ಸಂಭ್ರಮದಲ್ಲಿ. ಜತೆಯಲ್ಲೇ ಇರುವ ಇಮೇಜ್‌ನಲ್ಲೂ ೬೧ - ಸಂಭ್ರಮ!. ಎರಡೂ ಕಡೆ ಒಂದೇ ಮಾತು. ಅಂತೆಯೇ ಬರಹದ ತುಂಬ ಪ್ರಜಾವಾಣಿ ಎನ್ನುವ ಪದ ಏಳು ಬಾರಿ ಬಳಕೆಯಾಗಿದೆ. ಮಾಸ್ಟ್ ಹೆಡ್ ಪ್ರಜಾವಾಣಿ ಆಗಿರುವಾಗ ಪತ್ರಿಕೆ ಹೆಸರು ಬರಹದಲ್ಲಿ ಅಷ್ಟು ಬಾರಿ ಬಳಕೆಯಾಗುವ ಅಗತ್ಯವಿತ್ತೆ?
ಕೊನೆಮಾತು:
ಇಂದು ಪ್ರಕಟಗೊಳ್ಳುತ್ತಿರುವ ಕನ್ನಡ ಪತ್ರಿಕೆಗಳಲ್ಲಿ ಸಮಷ್ಟಿಯನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಬಲ್ಲ ಶಕ್ತಿಯಿರುವ ಪತ್ರಿಕೆ ಪ್ರಜಾವಾಣಿ ಮಾತ್ರ. ಪತ್ರಿಕೆ ಕಾಲಕಾಲಕ್ಕೆ ತನ್ನ ಬರಹಗಳ ಮೂಲಕ ಮತ್ತಷ್ಟು ಮೊನಚಾಗಿ ಓದುಗರಿಗೆ ಸದಾ ಹತ್ತಿರವಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ. ಈ ಕಾರಣಕ್ಕೆ ಇಂತಹದೊಂದು ಬರಹ ಬರೆಯಬೇಕಾಯ್ತು.

2 comments:

jomon varghese said...

ಖಂಡಿತ. ಪ್ರಜಾವಾಣಿಯ ಇಂದಿನ ಮುಖಪುಟ ಸಂಪಾದಕೀಯವನ್ನು ಓದಿದ ನನಗೂ ಹಾಗೆನಿಸಿತು. ಯಾರೋ ಟ್ರೈನಿ ಪತ್ರಕರ್ತರು ಬರೆದ ಸಂಪಾದಕೀಯ ಇದ್ದಂತಿದೆ. ಏನು ಮಾಡುವುದು ಪ್ರಜಾವಾಣಿಯಲ್ಲಿದ್ದ ಹಿರಿಯ ಪತ್ರಕರ್ತರೆಲ್ಲ ಪತ್ರಿಕೆ ಬಿಟ್ಟು ಟಿವಿ ಚಾನೆಲ್ ಗಳಿಗೆ ಗುಳೆ ಹೋಗುತ್ತಿದ್ದಾರಂತೆ. ಇಚೆಗೆ ಸಾಪ್ತಹಿಕ ಪುರವಣಿಯನ್ನು ನೋಡುವಾಗಲೂ ಹೀಗೆಯೇ ಅನಿಸುತ್ತದೆ.

ಶ್ರೀನಿವಾಸಗೌಡ said...

ಪ್ರಜಾವಾಣಿ ಏನಾಗುತ್ತಿದೆ ಎಂಬುದಕ್ಕೆ ಇಂದಿನ ಮುಖಪುಟ ಸಂಪಾದಕೀಯವೇ ಸಾಕು,ಬೆಳಿಗ್ಗೆ ನಾನು ಎಂದಿನಂತೆ ಕೈಗೆತ್ತಿಕೊಂಡಾಗ ಕುತೂಹಲ ಇತ್ತು ಪೂರ್ತಿ ಓದಿ ಮುಗಿಸಿದಾಗ ನಾನು ಓದಿದ್ದು ಪ್ರಜಾವಾಣಿನಾ ಎಂಬ ಅನುಮಾನ ಶುರುವಾಯಿತು.ಸಂಪಾದಕೀಯ ಬರಹಕ್ಕೆ ಇರಬೇಕಾದ ಘನತೆ ಅಲ್ಲಿರಲಿಲ್ಲ, ಮಾಹಿತಿಯಂತೂ ಕಲಸು ಮೆಲಸು. ಸಂಪಾದಕರಿಗಿರಬೇಕಾದ ಕನಿಷ್ಠ ಭಾಷಾ ಜ್ಞಾನವಾಗಲಿ, ಮಾಹಿತಿ ಶುದ್ಧತೆಯಾಗಲಿ ಕಾಣಲಿಲ್ಲ.ಪ್ರಜಾವಾಣಿ ಮತ್ತೊಮ್ಮೆ ಯಾವುದಕ್ಕೆ ಪುನರ್ ಅರ್ಪಣೆ ಮಾಡಿಕೊಳ್ಳುತ್ತೋ ತಿಳಿಯುತ್ತಿಲ್ಲ,ದಯವಿಟ್ಟು ಸಂಪಾದಕರು ಪುನರ್ ಅರ್ಪಣೆ ಮಾಡಿಕೊಳ್ಳುವುದಕ್ಕಿಂದ ಬೇರೆ ಏನಾದರೂ ಮಾಡಿಕೊಳ್ಳಲಿ.
ಇತ್ತೀಚಿನ ದಿನಗಳಲ್ಲಿ ಪ್ರಜಾವಾಣಿ ತನ್ನ ಜಾತ್ಯಾತೀತ ಮೌಲ್ಯಗಳನ್ನು ಮರೆತು ಯಾವುದೋ ಪಕ್ಷದ ವಕ್ತಾರನಂತೆ ಬದಲಾಗಿದೆ. ಹಳೆಯ ಸಹ ಸಂಪಾದಕರು ಬಿಜೆಪಿಗೆ ಬಕೆಟ್ ಹಿಡಿದು ಉನ್ನತ ಸ್ಥಾನಕ್ಕೆ ಹೋದ ಮೇಲೆ ಎಲ್ಲಾರು ಅದೇ ದಾರಿ ಹಿಡಿದಂತಿದೆ.
ಎಸ್.ಗೌಡ ಕೋಲಾರ