Wednesday, October 8, 2008

ಅಲ್ಲಿತ್ತು ಮನೆ.. ಇಲ್ಲಿ ಬಂದದ್ದು ಸುಮ್ಮನೆ...


ಇಂದಿನ ಪತ್ರಿಕೆಗಳ ಮುಖಪುಟ ಸುದ್ದಿ - ರಾಜ್ಯಕ್ಕೆ ಕೈ ತಪ್ಪಿದ ನ್ಯಾನೋ.. ದಿಟ. ನ್ಯಾನೋ ಕಾರು ತಯಾರಿಕ ಘಟಕವನ್ನು ಟಾಟಾ ಮೋಟಾರ್ಸ್ ಗುಜರಾತ್ನಲ್ಲಿ ಸ್ಥಾಪಿಸಲು ನಿರ್ಧರಿಸಿದ್ದಾರೆ. ರಾಜ್ಯ ಅವರ ಆಯ್ಕೆಯಾಗಲಿಲ್ಲ. ತೀರಾ, ಅದೇನು ಕರ್ನಾಟಕಕ್ಕೆ ಎರಗಿದ ದುರಂತವೇ? ನ್ಯಾನೋ ಇಲ್ಲದಿದ್ದರೆ ಇಲ್ಲಿಯ ಜನ ಬುದಕುಲು ಸಾಧ್ಯವೇ ಇಲ್ಲವೇನೋ ಎಂಬ ಮಟ್ಟಿಗೆ ಈ ಸುದ್ದಿಯನ್ನು ಚರ್ಚಿಸಲಾಗುತ್ತಿದೆ.
ರತನ್ ಟಾಟಾ ಒಬ್ಬ ಉದ್ಯಮಿ. ಎಲ್ಲಿ ಲಾಭದಾಯಕವೋ ಅಲ್ಲಿಗೇ ಹೋಗಿ ವ್ಯಾಪಾರ ಮಾಡ್ತಾರೆ. ಅವರ ತಯಾರಿಕಾ ಘಟಕಕ್ಕೆ ಅಗತ್ಯ ಸವಲತ್ತು ದೊರಕುವ ಕಡೆ ತಮ್ಮ ಯುನಿಟ್ ಹಾಕ್ತಾರೆ. ಈಗಲೂ ಹಾಗೆ.
ಟಾಟಾ ಮೋಟಾರ್ಸ್ ಕಂಪನಿಯವರು ಧಾರವಾಡ ಹತ್ತಿರದ ತಮ್ಮ ಭೂಮಿಗೆ ಭೇಟಿನೀಡಿದಾಗ ಹತ್ತಿರದಲ್ಲೆಲ್ಲೂ ಒಂದು ಪಂಚತಾರಾ ಹೊಟೇಲ್ ಇಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಂದು ದೂರದ ಬೆಂಗಳೂರಿಗೆ ಬರಬೇಕು. ಇನ್ನು ಅಗತ್ಯ ಜಮೀನನ್ನು ಸರಕಾರ ಇನ್ನಷ್ಟೇ ರೈತರಿಂದ ಕೊಂಡು ಕೊಡಬೇಕು. ಆದರೆ ಗುಜರಾತ್ ನಲ್ಲಿ ಆ ಪರಿಸ್ಥಿತಿ ಇರಲಿಲ್ಲ. ಅಲ್ಲಿ ಎಲ್ಲವೂ ಲಭ್ಯವಿತ್ತು. ಸಾನಂದ್ ಅಹಮದಾಬಾದ್ ನಿಂದ ಕೇವಲ ಇಪ್ಪತ್ತೈದು ಕಿ.ಮೀ ದೂರ. ಮೇಲಾಗಿ ಅದು ಬಿಜೆಪಿ ನೇತಾರ ಹಾಗೂ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಅಡ್ವಾನಿ ಪ್ರತಿನಿಧಿಸುವ ಕ್ಷೇತ್ರವಾದ ಗಾಂಧಿನಗರದ ವ್ಯಾಪ್ತಿಗೆ ಒಳಪಡುತ್ತೆ. ಈ ಎಲ್ಲಾ ಕಾರಣಗಳು ರತನ್ ಟಾಟಾ, ಕರ್ನಾಟಕಕ್ಕೆ ಟಾಟಾ ಹೇಳುವಂತೆ ಮಾಡಿದವು.
ಮೇಲಾಗಿ ಟಾಟಾ ಕಂಪನಿ ಸಿಂಗೂರ್ ನಲ್ಲಿ ತಮ್ಮ ಯುನಿಟ್ಗಾಗಿ ಈಗಾಗಲೇ ಖರ್ಚು ಮಾಡಿರುವ ಹಣವನ್ನು ಕರ್ನಾಟಕ ಸರಕಾರ ತೆರಿಗೆ ವಿನಾಯತಿ ರೂಪದಲ್ಲಿ ಹಿಂದಕ್ಕೆ ಪಡೆಯಲು ಯತ್ನಿಸಿತ್ತು. ಸರಕಾರವೂ ಸಮ್ಮತಿಸಿತ್ತು. ಆದರೆ ಜಮೀನು, ನೀರಿನ ವ್ಯವಸ್ಥೆ, ವಿದ್ಯುಚ್ಛಕ್ತಿ, ಪಂಚತಾರಾ ಹೊಟೇಲ್..ಇವಾವೂ ಅವರು ಅಂದು ಕೊಂಡಂತೆ ಲಭ್ಯವಾಗಲಿಲ್ಲ.
ಅಷ್ಟಕ್ಕೂ ಟಾಟಾ ಯುನಿಟ್ ನಿಂದ ಲಾಭವಾಗುತ್ತಿದ್ದು ಕೆಲವೇ ಮಂದಿಗೆ. ಕೆಲವು ಸಾವಿರ ಉದ್ಯೋಗ ಸ್ರುಷ್ಟಿಯಾಗುತ್ತಿತ್ತು ಎನ್ನವುದು ನಿಜವೇ ಆದರೂ, ಅಲ್ಲಿಯ ಉದ್ಯೋಗಿಗಳೆಲ್ಲ ಕನ್ನಡಿಗರೇ ಆಗಿರಬೇಕೆಂಬ ಕಾನೂನೇನಿಲ್ಲ. ದೈಹಿಕ ಶ್ರಮ ಬಯಸುವ ಕೆಲಸಗಳಿಗೆ ಒಂದಿಷ್ಟು ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿದ್ದರಷ್ಟೆ. ಅದಕ್ಕಾಗಿ ಏಕಿಷ್ಟು ದು:ಖ.
ತಮಾಷೆ ಎಂದರೆ, ಬಡ ರೈತರಿಗಾಗಿ ಬಗರ್ ಹುಕುಂ ಸಾಗುವಳಿ ಜಮೀನು ನೀಡಲು ನೂರೆಂಟು ಬಾರಿ ಯೋಚಿಸುವ ಸರಕಾರ ಸಾವಿರಾರು ಎಕರೆ ಜಮೀನನ್ನು ಒಮ್ಮೆಲೆ ಇಂತಹ ಕಂಪನಿಗಳಿಗೆ ನೀಡಲು ಮುಂದಾಗಿಬಿಡುತ್ತದೆ!
ತುರ್ತಾಗಿ ಆಗಬೇಕಿರುವುದು - ಎಲ್ಲಾ ನಗರಗಳಿಗೂ ಅಗತ್ಯ ಮೂಲಸೌಲಭ್ಯ ಒದಗಿಸುವ ಕಾರ್ಯ. ರಸ್ತೆ, ನೀರು, ವಿದ್ಯುತ್ ಸರಿಯಾಗಿ ಒದಗಿಸಿದರೆ ಸಣ್ಣ ಸಣ್ಣ ಊರುಗಳಲ್ಲೂ ಪಂಚತಾರಾ ಹೊಟೇಲ್ಗಳು ಕಣ್ತೆರೆಯುತ್ತವೆ, ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಸರಕಾರ ಮೊದಲು ಇತ್ತ ಗಮನ ಹರಿಸಲಿ.

No comments: