Tuesday, September 30, 2008

ಏನ್ ನಡೀತಾ ಇದೆ ಅಲ್ಲಿ.., ಟೀವಿ9 ಹೇಳ್ಬೇಕು..

ಸೋಮವಾರ ಅಹ್ಮದಾಬಾದ್‌ನಲ್ಲಿ ೧೭ ಕಚ್ಚಾ ಬಾಂಬ್‌ಗಳು ಪತ್ತೆಯಾದ ಸುದ್ದಿಯನ್ನು ಬಿತ್ತರಿಸಿದ ಟೀವಿ೯ ಪರಿ ಪ್ರಶ್ನಾರ್ಹವಾದುದು. ಅಹ್ಮದಾಬಾದ್‌ನಲ್ಲಿ ಟೀವಿ೯ ಕನ್ನಡ ವಾಹಿನಿಗೆ ಯಾವ ಪ್ರತಿನಿಧಿಯೂ ಇಲ್ಲ. ಅದು ಸುದ್ದಿ ಸಂಸ್ಥೆಗಳ ನೆರವಿನಿಂದ ಪ್ರಸಾರ ಮಾಡಬೇಕು. ಆದರೆ ಟೀವಿ೯ ವರದಿ ಮಾಡಿದ್ದು ಪ್ರತ್ಯಕ್ಷದರ್ಶಿಯಂತೆ.
ನ್ಯೂಸ್ ಆಂಕರ್ ಹಮೀದ್ ಪಾಳ್ಯ ಮೊದಲಿಗೆ ಸುದ್ದಿ ಓದಿದರು. ನಂತರ ಮತ್ತೊಬ್ಬ ಟೀವಿ೯ ಉದ್ಯೋಗಿ ಸುನೀಲ್ ಶಿರಸಂಗಿ ಜೊತೆ ಚರ್ಚೆ. ಹೀಗೆ ಚರ್ಚೆ ಮಾಡಲು ಸುನೀಲ್ ಯಾರು? ಸುನೀಲ್‌ಗೂ ಈ ದಾಳಿಗೂ ಏನು ಸಂಬಂಧ? ಅವರೇನಾದರೂ ಅಹ್ಮದಾಬಾದ್‌ನಲ್ಲಿ ಇದ್ದರೆ? ಇಷ್ಟಕ್ಕೂ ವಾಯ್ಸ್ ಓವರ್ ಕೊಡುವಂತಹ ಮಾತುಗಳೆಲ್ಲವನ್ನೂ ಸುನೀಲ್ ಶಿರಸಂಗಿ ಜೊತೆ ಚರ್ಚೆ ಮಾಡುವ ಪ್ರಮೇಯ ಏನಿತ್ತು? ಸುನೀಲ್ ಶಿರಸಂಗಿ ಎಲ್ಲರಿಗೂ ಗೊತ್ತಿರುವಂತೆ ಉತ್ತಮ ಕ್ರೀಡಾ ವರದಿಗಾರ. ಆ ವಿಚಾರವಾಗಿ ಚರ್ಚೆ ಮಾಡಲಿ. ಆದರೆ ಬಾಂಬ್ ದಾಳಿ ಕುರಿತು ಚರ್ಚಿಸಲು ಅವರೇನು ವಿಷಯ ತಜ್ಞರೆ? ಪೊಲೀಸ್ ಅಧಿಕಾರಿಯೇ? ಅಥವಾ ಈ ದಾಳಿ ಕುರಿತು ಉತ್ತರಿಸಲೇ ಬೇಕಾದ ಜವಾಬ್ದಾರಿಯುತ ವ್ಯಕ್ತಿಯೇ. ಯಾವುದೂ ಅಲ್ಲ. ಕಡೆಯ ಪಕ್ಷ ಘಟನೆ ವಿವರಿಸುವುದಕ್ಕೆ ಖುದ್ದು ಸ್ಥಳದಲ್ಲಿರುವ ವರದಿಗಾರನೂ ಅಲ್ಲ. ಮೇಲಾಗಿ ಅವರಿಗೆ ಬಾಂಬ್ ದಾಳಿಯ ಆಯಾಮಗಳೇ ತಿಳಿದಿರಲಿಲ್ಲ. ಅವರು ಮಾತನಾಡುತ್ತಾ, ದೇಶದ ಐತಿಹಾಸಿಕ ಸ್ಥಳಗಳೆಲ್ಲಾ ಮದರಸಾಗಳಾಗುತ್ತಿವೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ತಮ್ಮ ಈ ವಾದವನ್ನು ಸಮರ್ಥಿಸಿಕೊಳ್ಳಲು ಯಾವೊಂದು ಉದಾಹರಣೆಯನ್ನಾಲಿ, ನಿದರ್ಶನವನ್ನಾಗಲಿ ನೀಡಲಿಲ್ಲ. ಇಷ್ಟಕ್ಕೂ ಅಹ್ಮದಾಬಾದ್‌ನಲ್ಲಿ ಬಾಂಬ್‌ಗಳು ಸಿಕ್ಕಿರುವುದಕ್ಕೂ, ಮಂದಿರ, ಮದರಸಾಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ? (ಮೊನ್ನೆ ತಾನೆ ಸಿಎನ್‌ಎನ್ ಐಬಿಎನ್ ಸಮೀಕ್ಷೆಯಲ್ಲಿ ಶೇ. ೬೦ರಷ್ಟು ಮಂದಿ ಭಯೋತ್ಪಾದನೆಗೂ ಧರ್ಮಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ).
ನಂತರ ಟೀವಿ೯ ದೆಹಲಿ ಪ್ರತಿನಿಧಿ ಶಿವಪ್ರಸಾದ್ ದೂರವಾಣಿ ಮೂಲಕ ಚರ್ಚೆ. ಅದು ಇನ್ನೊಂದು ಅಜ್ಞಾನದ ಅಧ್ಯಾಯ. ಶಿವಪ್ರಸಾದ್ ಬಾಂಬ್ ಪೂರೈಕೆ ಬಗ್ಗೆ ಮಾತನಾಡಿದರು. ಉಗ್ರರಿಗೆ ಪಾಕಿಸ್ತಾನದಿಂದ ಬಾಂಬ್‌ಗಳು ಪೂರೈಕೆ ಆಗುತ್ತಿದ್ದವು. ಈಗ ಇಲ್ಲೇ ತಯಾರಿಸಲಾಗುತ್ತಿದೆ ಎಂದರು.
ಇವರಾದ ನಂತರ ಮೈಸೂರಿನ ಟೀವಿ೯ ಪ್ರತಿನಿಧಿ ಗಂಜಿಗೆರೆ ಸುರೇಶ್ ಅಖಾಡಕ್ಕಿಳಿದರು. ಸುರೇಶ್ ಚರ್ಚೆಗೆ ಬರಲು ಇದ್ದ ಏಕೈಕ ಕಾರಣ ನಿನ್ನೆ ಮೈಸೂರಿನಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದು. ಆಗ ತಾನೇ ನಿದ್ರೆಯಿಂದ ಎದ್ದು ಬಂದಂತೆ ಮಾತನಾಡಿದ ಸುರೇಶ್ ಮೈಸೂರಿಗೆ ಗಂಡಾಂತರ ಕಾದಿದೆ ಎಂಬ ಹೊಸ ಬಾಂಬ್ ಹಾಕಿದರು.
ಇಷ್ಟಕ್ಕೂ ದಸರಾ ವೇಳೆ ಗಲಭೆ ಸೃಷ್ಟಿಸಬಹುದು ಎನ್ನುವ ಹಿನ್ನೆಲೆಯಲ್ಲಿ ಮೂವರನ್ನು ಸಂಶಯಾಸ್ಪದವಾಗಿ ಬಂಧಿಸಲಾಗಿದೆ. ಆದರೆ ಸುರೇಶ್ ಮಾತುಗಳಲ್ಲಿ ಈ ಮೂವರು ಶಂಕಿತ ಉಗ್ರರಾಗಿಬಿಟ್ಟರು.
ಅಲ್ಲಿಗೆ ಚರ್ಚೆ ಮುಗಿಯಿತು. ಇದಿಷ್ಟೂ ಸುದ್ದಿಯನ್ನು ಪ್ರಸಾರ ಮಾಡಿದ ಟೀವಿ೯ ಏನನ್ನು ಹೇಳಿತು? ಎಂದು ಮಾತ್ರ ಕೇಳಬೇಡಿ. ಒಂದು ಸುದ್ದಿಯನ್ನು ಸುದ್ದಿಯಾಗಿ ಅಷ್ಟೆ ನೋಡದೆ ಅದನ್ನು ವರ್ಣರಂಜಿತವಾಗಿ ಉಣಬಡಿಸುವ ಇಂಥ ಉಮೇದಿಗೆ ಏನು ಹೇಳಬೇಕು?

ಇನ್ನೊಂದು ಮಾತು.
ಸುವರ್ಣ ಕನ್ನಡ ವಾಹಿನಿ ಕುರಿತು. ಸುವರ್ಣ ವಾಹಿನಿಯ ವಾರ್ತಾ ವಾಚಕಿ ಶ್ವೇತ ದೆಹಲಿಯ ಪ್ರತಿನಿಧಿ ಪ್ರಶಾಂತ ನಾತು ಅವರಿಗೆ ದೂರವಾಣಿ ಕರೆ ಮಾಡಿ ಅಹ್ಮದಾಬಾದ್‌ನಲ್ಲಿ ಬಾಂಬ್ ಸಿಕ್ಕಿರುವುದರಿಂದ ದೆಹಲಿಯ ಪರಿಸ್ಥಿತಿ ಹೇಗಿದೆ ಎಂಬ ಅಸಂಬದ್ಧ ಪ್ರಶ್ನೆಯನ್ನು ಕೇಳಿದರು. ಥಟ್ಟನೆ ಉತ್ತರ ಕೊಟ್ಟ ಪ್ರಶಾಂತ್ ಏನೂ ಗೊತ್ತಿಲ್ಲ ಶ್ವೇತ ಎಂದರು. ಆಮೇಲೆ ಮೊನ್ನೆಯ ದಾಳಿಯಿಂದ ಜನ ಸ್ವಲ್ಪ ಆತಂಕಗೊಂಡಿದ್ದಾರೆ ಶ್ವೇತ ಎಂದರು. ಇವರಿಬ್ಬರ ಸಂಭಾಷಣೆ ಸ್ನೇಹಿತರೀರ್ವರ ನಡುವಿನ ದೂರವಾಣಿ ಮಾತುಕತೆಯಂತಿತ್ತು.
ಯೋಚಿಸಿ, ಸುವರ್ಣ ಚಾನೆಲ್ ದೆಹಲಿ ಪ್ರತಿನಿಧಿಗೆ ದೂರವಾಣಿ ಮಾಡಿ ಮಾತನಾಡಿಸಿ ಜನರಿಗೆ ಕೊಟ್ಟ ಮಾಹಿತಿಯಾದರೂ ಏನು? ಹೀಗೆ ಬೇಡದ ವಿಚಾರಗಳನ್ನು ಚ್ಯೂಯಿಂಗ್ ಗಮ್ ರೀತಿ ಜಗಿಯುವ ಕೆಟ್ಟ ಚಪಲ ಯಾಕೆ?

4 comments:

sugandhi said...

ನೀವು ಟಿವಿ೯ ಸಿಬ್ಬಂದಿಯನ್ನು ಅಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಸುನಿಲ್ ಶಿರಸಂಗಿ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ ತನಿಖೆ ನಡೆಸುತ್ತಿರುವ ತಂಡದ ಬಹುಮುಖ್ಯ ಅಧಿಕಾರಿಯಾಗಿದ್ದವರು ಈಗ ರಾಜೀನಾಮೆ ಕೊಟ್ಟು ಟಿವಿ೯ ಸೇರಿದ್ದಾರೆ. ಅವರು ಮದರಸಾಗಳ ಬಗ್ಗೆ ಈಗಾಗಲೇ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಅವರು ವಿಷಯತಜ್ಞರಾಗಿದ್ದರಿಂದಲೇ ಅವರನ್ನು ಹಮೀದ್ ಮಾತನಾಡಿಸಿದ್ದಾರೆ.
ಎರಡನೆಯದಾಗಿ ಶಿವಪ್ರಸಾದ್ ಅವರು ಬಾಂಬ್ ತಯಾರಿಕಾ ತಜ್ಞರು. ಈ ವಿಷಯದಲ್ಲಿ ಅವರು ಸ್ನಾತಕೋತ್ತರ ಪದವೀಧರರು. ಅವರಿಗೆ ಬಾಂಬುಗಳನ್ನು ಎಲ್ಲಿ ಹೇಗೆ ತಯಾರಿಸುತ್ತಾರೆ ಎಂಬುದೆಲ್ಲಾ ಚೆನ್ನಾಗಿ ಗೊತ್ತಿದೆ.
ಇನ್ನು ಸುರೇಶ್ ಅವರು ತ್ರಿಕಾಲ ಜ್ಞಾನಿಗಳು. ಹಾಗಾಗಿ ಅವರು ಎಲ್ಲಿ ಯಾರಿಗೆ ಗಂಡಾಂತರ ಕಾದಿದೆ ಎಂಬುದನ್ನು ಊಹಿಸಿ ಹೇಳಬಲ್ಲರು.
ಕಡೆಯದಾಗಿ ಸುವರ್ಣದ ಶ್ವೇತ ಅಹಮದಾಬಾದ್ ಸ್ಫೋಟದ ಬಗ್ಗೆ ಮಾತನಾಡುತ್ತ ದೆಹಲಿ ಪ್ರತಿನಿಧಿ ಪ್ರಶಾಂತ್‌ಗೆ ದೆಹಲಿಯಲ್ಲಿ ಪರಿಸ್ಥಿತಿ ಹೇಗಿದೆ ಎಂದು ಕೇಳಿದ್ದು ಸರಿಯಾಗೇ ಇದೆ. ದೆಹಲಿಯ ಮನೆಮನೆಯಲ್ಲೂ ದಿಗಿಲು ಹೊತ್ತಿಕೊಂಡು ಉರಿಯುತ್ತಿದೆ. ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕದಲ್ಲಿ ಜನ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ ಎಂದು ಪ್ರಶಾಂತ್ ಹೇಳಬೇಕಿತ್ತು. ಪೂರ್ ಫೆಲೋ ಟಿವಿ೯ನಲ್ಲಿ ಕೆಲಸ ಮಾಡುವುದು ಹೇಗೆ ಎಂಬುದು ಅವರಿಗೆ ಇನ್ನೂ ಗೊತ್ತಿಲ್ಲ.
ಸಾಕಾ ಇನ್ನೂ ಬೇಕಾ?

ಮಲ್ಲಿಕಾಜು೯ನ ತಿಪ್ಪಾರ said...

Tv9 aavantara bagge barede nim baraha chennagide... Hageye sugandhi22 avar comment innu chennagide

suddimaatu said...

ಸುಗಂಧಿ22,
ನಮ್ಮ ಬ್ಲಾಗ್ ನ ಬರಹಗಳು ನಿಮ್ಮ ಪ್ರತಿಕ್ರಿಯೆಗಳಿಂದ ಹೆಚ್ಚೆಚ್ಚು ಓದಿಸಿಕೊಳ್ಳುತ್ತಿವೆ. ನಿಮಗೆ ಧನ್ಯವಾದಗಳು. ನೀವೂ ಇಂದಿನ ಪತ್ರಿಕೆ, ಮಾಧ್ಯಮ ಕುರಿತಂತೆ ನಿಮ್ಮ ಬರಹಗಳನ್ನು ಈ ಬ್ಲಾಗ್ ಓದುಗರೊಂದಿಗೆ ಹಂಚಿಕೊಳ್ಳಬಹುದು.
ಸಂಪರ್ಕಿಸಿ: ladayi08@gmail.com

BELADINGALU said...

neevu barediruva tv-9 mattu suvarna tv aphasya comment galu vasthavakke tumba hattirvadanthavugalu.
tv madhyamagalu enu madabeku ennuvudnnu maretu bedada ellavannu maduttive. addarinda adakke takka uttara nimma articalnallide.