Saturday, May 2, 2009

ಚುನಾವಣಾ ಆರ್ಭಟ ಮತ್ತು ಸಮೀಕ್ಷೆ

ರಾಜ್ಯದಲ್ಲಿ ಚುನಾವಣಾ ಬಿಸಿ ತಣ್ಣಗಾಗಿದೆ. ಒಮ್ಮೆ ಹಿಂದಿನ ದಿನಗಳ ಪತ್ರಿಕೆಗಳನ್ನು ತಿರುವಿ ಹಾಕಿದರೆ ಕಣ್ಣಿಗೆ ರಪ್ಪನೆ ರಾಚುವುದು ನಮ್ಮ ರಾಜಕಾರಣಿಗಳ ಆರ್ಭಟ. ಒಬ್ಬರು ಕೈ ಕಡಿಯುವ ಮಾತನಾಡಿದರೆ, ಮತ್ತೊಬ್ಬರು ತೀರಾ ತಲೆಗೆ ಕೈ ಹಾಕಿದರು. ಕೆಲವರು ಇನ್ನೂ ಮುಂದೆ ಹೋಗಿ ತಿಥಿ ಮಾಡುತ್ತೇವೆ ಎಂದರು. ಇವರೆಲ್ಲ ನಮ್ಮನ್ನು ಆಳುವವರು!
ಕಳೆದ ವಿಧಾನಸಭಾ ಚುನಾವಣೆ ಸಂದರ್ಭವನ್ನು ನೆನಪು ಮಾಡಿಕೊಂಡರೆ ಎರಡು ಭಿನ್ನ ಘಟನೆಗಳು ನೆನಪಾಗುತ್ತವೆ. ಒಂದು ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಮಹಿಮಾ ಪಟೇಲ್ ಉಪವಾಸಕ್ಕೆ ಕೂತರು. ತನ್ನ ಉಪವಾಸದ ಮುಊಲಕ ಜನತೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದರು.
ಇನ್ನೊಂದು ಪ್ರಯೋಗ - ರವಿ ಕೃಷ್ಣಾರೆಡ್ಡಿಯದು. ಜನರಿಂದಲೇ ಹಣ ಸಂಗ್ರಹಿಸಿ, ಅದೇ ದುಡ್ಡನ್ನು ಪ್ರಚಾರಕ್ಕೆ ವೆಚ್ಚ ಮಾಡಿದರು. ನಿಜ. ಚುನಾವಣೆಯಲ್ಲಿ ಇಬ್ಬರೂ ಸೋತರು. ಮೇಲ್ನೋಟಕ್ಕೆ ಈ ಪ್ರಯತ್ನಗಳು ತೀರಾ ಅಸಹಜ ಎನ್ನುವಂತೆ ಕಂಡುಬಂದರೂ, ಬದಲಾವಣೆಯೆಡೆಗೆ ನಡೆದ ಪ್ರಯತ್ನಗಳು ಎಂದು ನೋಡಬೇಕಿದೆ. ಈ ಬಾರಿ ಇಂತಹದೇ ಪ್ರಯತ್ನಕ್ಕೆ ಕೈ ಹಾಕಿದವರು ರೈತಸಂಘದ ಪುಟ್ಟಣ್ಣಯ್ಯ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದಾರೆ. ಅವರ ಪರ ಪ್ರಚಾರಕ್ಕೆ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಅನೇಕ ರೈತ ಕುಟುಂಬಗಳು ರೊಟ್ಟಿ ಕಟ್ಟಿಕೊಂಡು ಮಂಡ್ಯಕ್ಕೆ ಬಂದಿದ್ದಾರೆ.
ಮಹಿಮಾ ಪಟೇಲ್, ರೆಡ್ಡಿ, ಪುಟ್ಟಣ್ಣಯ್ಯ ಗೆಲ್ಲುವುದಕ್ಕಿಂತಲೂ, ಒಂದು ಚುನಾವಣೆಯನ್ನು ಹೀಗೂ ಸ್ಪರ್ಧಿಸಬಹುದು ಎನ್ನುವುದನ್ನು ಜನತೆಗೆ ತೋರಿಸಿಕೊಟ್ಟರಲ್ಲ. ಆಗಾಗ ಇಂತಹ ಪ್ರಯತ್ನಗಳಾಗದಿದ್ದರೆ, ಬದಲಾವಣೆ ಸಾಧ್ಯ ಎನ್ನುವುದೇ ನಮ್ಮ ಜನರಿಗೆ ಮರೆತು ಹೋಗಿಬಿಡುತ್ತದೆ.
ಈ ಚುನಾವಣೆಯಲ್ಲಿ ಕನ್ನಡ ಪತ್ರಿಕೆಗಳು ನಿರ್ವಹಿಸಿದ ಪಾತ್ರ ಒಂದು ಗಂಭೀರ ಅಧ್ಯಯನಕ್ಕೆ ಯೋಗ್ಯ. ಒಂದು ಪತ್ರಿಕೆಯಂತೂ, ರಾಷ್ಟ್ರೀಯ ಪಕ್ಷವೊಂದರ ಮುಖವಾಣಿಯಂತೆ ವರ್ತಿಸಿತು. ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲೇಬೇಕೆಂದು ಅದರ ಸಂಪಾದಕರು ಪತ್ರಿಕೆ ಮುಖೇನ ಶಿಫಾರಸ್ಸು ಮಾಡಿದರು. ನಂತರ ಅವರನ್ನು ಗೆಲ್ಲುವ ಕುದುರೆ ಎಂದು ಬಿಂಬಿಸುವ ಮುಊಲಕ ಅಭ್ಯರ್ಥಿಯ ಬೆನ್ನಿಗೆ ನಿಂತರು.
ಸಮೀಕ್ಷೆಗಳು:
ಚುನಾವಣೆ ವರದಿಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ನಿಷ್ಪಕ್ಷಪಾತಿಯಾಗಿ ವರ್ತಿಸಿದ್ದು ಪ್ರಜಾವಾಣಿ ಮತ್ತು ಕನ್ನಡಪ್ರಭ. ಈ ಎರಡೂ ಪತ್ರಿಕೆಗಳು ಯಾರ ಪರವೂ ನಿಲ್ಲಲಿಲ್ಲ. ಆದರೆ ವಿಜಯ ಕರ್ನಾಟಕ ಮಾತ್ರ ಹಾಗೆ ಕಾಣಲಿಲ್ಲ. ಈ ಪತ್ರಿಕೆ ನಡೆಸಿದ ಬಹುತೇಕ ಕ್ಷೇತ್ರ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲ್ಲುವುದೆಂದೇ ಬರೆದರು. ಓದುಗ ಸಮುದಾಯ ಒಂದು ಪತ್ರಿಕೆಯನ್ನು ಒಂದು ಪಕ್ಷಕ್ಕೆ ಸಮೀಕರಿಸಿ ನೋಡುತ್ತಾನೆಂದರೆ, ಅದು ಆ ಮಟ್ಟಿಗೆ ಪತ್ರಿಕೆ ಸಮುದಾಯದ ಪ್ರತಿನಿಧಿಯಾಗುವಲ್ಲಿ ಸೋತಿದೆ ಎಂದೇ ಅರ್ಥ.
ಎಲ್ಲಾ ಪತ್ರಿಕೆಗಳು ಸಮೀಕ್ಷೆಗಳನ್ನು ಪ್ರಕಟಿಸಿದರು. ಹಾಗಾದರೆ ಇವರ ವರದಿಗಾರರು ಸಮೀಕ್ಷೆ ನಡೆಸಿದ ಪರಿ ಯಾವುದು? ಒಂದು ಕ್ಷೇತ್ರದ ಒಂದಿಷ್ಟು ಹಳ್ಳಿ, ನಗರ ಪ್ರದೇಶಗಳಲ್ಲಿ ಕೆಲವರನ್ನು ಮಾತನಾಡಿಸುತ್ತಾರೆ. ಅವರ ಒಲವು ನಿಲುವುಗಳನ್ನು ಕೇಳಿ ಪಡೆಯುತ್ತಾರೆ. ಆ ಮುಊಲಕ ಒಂದು ಅಭಿಪ್ರಾಯಕ್ಕೆ ವರದಿಗಾರ (ಸಮೀಕ್ಷಕ) ಬರುತ್ತಾನೆ. ಅದನ್ನೇ ತನ್ನ ಸಮೀಕ್ಷೆಯಲ್ಲಿ ಬರೆಯುತ್ತಾನೆ. ಆದರೆ ಯಾವ ಪತ್ರಿಕೆಯುಊ ತನ್ನ ಸಮೀಕ್ಷೆಗಾಗಿ ವೈಜ್ಞಾನಿಕ ಮಾದರಿಯನ್ನು ಅನುಸರಿಸಿಲ್ಲ. ಜಾತಿ ಲೆಕ್ಕಾಚಾರ, ಅಭ್ಯರ್ಥಿಯ ವರ್ಚಸ್ಸು, ಬೆಂಬಲಕ್ಕೆ ನಿಂತಿರುವ ಪಕ್ಷ... ಇಂತಹ ವಿವರಗಳ ಜೊತೆ ಆಡ ಆಡುವುದೇ ಸಮೀಕ್ಷೆ.
ಈ ನಿಟ್ಟಿನಲ್ಲಿ ಪತ್ರಿಕಾಲಯಗಳು, ವರದಿಗಾರರು ಯೋಚಿಸುವುದು ಸೂಕ್ತ.

2 comments:

ಗೋವಿಂದ್ರಾಜ್ said...

ನಿಜ ಹೇಳಬೇಕೆಂದರೆ ಎಲ್ಲ ಪತ್ರಿಕೆಗಲದ್ದು ಒಂದು ತೆರನಾದ ಸುದ್ದಿ ನೀಡುವಿಕೆ ಆದರೆ ಕನ್ನಡ ಪ್ರಭ ದ್ದೆ ವಿಭಿನ್ನ ಯಾವ ಪಕ್ಷದ ವಕ್ತಾರ ಆಗಿಯೂ ಅದು ಸುದ್ದಿ ನೀಡಲಿಲ್ಲ. ಮತ್ತು ವಿಶೇಷ ಸುದ್ದಿ ಹೆಸರಿನಲ್ಲಿ ನಮನ್ನೇ ವಿಸ್ಮಯ ಗೊಳಿಸುವ ಅದ್ಭುತವಾದ ಸುದ್ದಿ ನೀಡಿತು. ಜತೆಗೆ ಸುದ್ದಿ ಯಷ್ಟೇ ಅಲ್ಲದೆ ಅದರ ಒಳ ತೋಟಿ ಯನ್ನು ನೀಡಿತು. ಅಲ್ಲಿನ ಪತ್ರಿಕೆ ಧೋರಣೆ ಜತೆಗೆ ಪತ್ರಕರ್ತರ ಕ್ರಿಯಾಶೀಲತೆ ಅದಕ್ಕೆ ಹಿಡಿದ ಕನ್ನಡಿ..ಹಾಗೆ ನೋಡಿದರೆ ಪ್ರಜಾವಾಣಿ ಯದು ಎಂದಿನ ಶ್ಯ್ಲಿಯೇ ಎಂದುಕೊಳ್ಳಬೇಕು...ಹಾಗಂತೆ ಅದೇನು ಕಂಮಿಯಗೆನು ಸುದ್ದಿ ನೀಡಲಿಲ್ಲ...ಎಂಬುದು ಸತ್ಯ...ಚನ್ನೆಲ್ ಗಳದ್ದು ಎಂದಿನ ಗೋಳು...

Anonymous said...

guys, where were you?
busy with election scedules....